ಕಲಬುರಗಿ: ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಪೋಷಕರು ಹಾಗೂ ಸ್ನೇಹಿತರು ಸಹಕರಿಸುತ್ತಿದ್ದ ದೃಶ್ಯ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಕಂಡು ಬಂದಿದೆ.
ಮಣ್ಣೂರು ಗ್ರಾಮದ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಮಣ್ಣೂರು ಪರೀಕ್ಷಾ ಕೇಂದ್ರದಲ್ಲಿ 298ರ ಪೈಕಿಯ 296 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ಎಸ್ಎಸ್ಎಲ್ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ವೇಳೆ ನಕಲು ಮಾಡಲು ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ನೇಹಿತರು ಪರೀಕ್ಷಾ ಕೇಂದ್ರದ ಹೊರಗಿನಿಂದ ಸಹಾಯ ಮಾಡುತ್ತಿದ್ದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರೀಕ್ಷಾ ಕೊಠಡಿಯ ಕಿಟಕಿ ಹೊರಗಿನಿಂದ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ, ಪುಸ್ತಕಗಳನ್ನು ಕೊಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಪರೀಕ್ಷಾ ಕೇಂದ್ರದಲ್ಲಿರುವ ಸಿಬ್ಬಂದಿಯೇ ಸಾಮೂಹಿಕ ನಕಲಿಗೆ ಸಹಕರಿಸಿದ್ದಾರೆಂದು ಆರೋಪಗಳು ಕೇಳಿ ಬಂದಿದ್ದು, ಸ್ಕ್ಟಾಡ್ ತಂಡದಿಂದ ಪರೀಕ್ಷಾ ಕೇಂದ್ರದ ಮೇಲೆ ದಾಳಿ ನಡೆಸಿದಾಗ ನಕಲು ಮಾಡುತ್ತಿರುವುದು ಬಹಿರಂಗವಾಗಿದೆ. ಅಫಜಲಪುರ ಬಿಇಒ ವಸಂತ ರಾಠೋಡ್ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಆದರಿಂದಲೇ ಈ ರೀತಿ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.