ಕಲಬುರಗಿ: ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆಗೊಳಗಾದ ಪಕ್ಷದ ಇಬ್ಬರು ಕಾರ್ಯಕರ್ತರ (BJP Workers) ಕುಟುಂಬಗಳ ಸದಸ್ಯರನ್ನು ಪ್ರತಿಪಕ್ಷದ ನಾಯಕ ಆರ್. ಅಶೋಕ್ (R Ashoka) ಅವರು ಸೋಮವಾರ ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.
ಸೋಮವಾರ ಮಧ್ಯಾಹ್ನ ಕಲಬುರಗಿ ರೈಲು ನಿಲ್ದಾಣದಲ್ಲಿ (Kalaburagi Railway Station) ಅಯೋಧ್ಯೆಗೆ ತೆರಳಲಿರುವ ಭಕ್ತರ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಅವರು ಆಳಂದ ಮತ್ತು ಅಫಜಲಪುರ ತಾಲ್ಲೂಕು ಪ್ರವಾಸ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ಕಣ್ಣಿಗೆ ಖಾರದ ಪುಡಿ ಎರಚಿ ಸಂಸದ ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ
ಆಳಂದ ತಾಲ್ಲೂಕಿನ ಸರಸಂಬ ಗ್ರಾಮಕ್ಕೆ ತೆರಳಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಹನುಮಂತಪ್ಪ ಆಲೂರೆ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಆಲೂರೆ ಅವರ ಕುಟುಂಬ ಸದಸ್ಯರ ಜತೆ ಸಮಾಲೋಚನೆ ನಡೆಸಿ ಅವರಿಗೆ ಸಾಂತ್ವನ ಹೇಳಲಿದ್ದಾರೆ.
ಬಳಿಕ ಅಫಜಲಪುರ ತಾಲ್ಲೂಕಿನ ಸಾಗನೂರ ಗ್ರಾಮಕ್ಕೆ ತೆರಳಿ ಹತ್ಯೆಗೊಳಗಾಗಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಗಿರೀಶ್ ಚಕ್ರ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ. ಬಳಿಕ ಬಾಗಲಕೋಟೆಗೆ ತೆರಳಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಇದನ್ನೂ ಓದಿ: ರಾಡ್, ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೆ ಬಿಜೆಪಿ ಮುಖಂಡ ಸಾವು
ಮಂಗಳವಾರ ಬೆಳಗಾವಿಗೆ ಪ್ರಯಾಣ ಬೆಳೆಸಲಿರುವ ಅಶೋಕ್ ಅವರು ಸಂಜೆ ಕೆಎಲ್ಇ ಜೀರಿಗೆ ಸಭಾಂಗಣದಲ್ಲಿ ನಡೆಯುವ ಪ್ರಬುದ್ಧರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಜತೆ ಪಾಲ್ಗೊಳ್ಳಲಿದ್ದಾರೆ.
ಘಟನೆ – 1: ಕಳೆದ ಫೆಬ್ರವರಿ 29ರಂದು ಹಿರಿಯ ಬಿಜೆಪಿ ಮುಖಂಡ ಮಹಾಂತಪ್ಪಾ ಆಲೂರೆ ಅವರ ಮೇಲೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ಹೊರವಲಯದಲ್ಲಿ ಹಲ್ಲೆ ನಡೆದಿತ್ತು. ಮೂವರು ಅಪರಿಚಿತರು ರಾಡ್, ತಲ್ವಾರ್ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಘಟನೆ – 2: ಮಹಾಂತಪ್ಪಾ ಆಲೂರೆ ಅವರ ಹತ್ಯೆ ಬೆನ್ನಲ್ಲೇ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಸಂಸದ ಡಾ.ಉಮೇಶ್ ಜಾಧವ್ ಬಲಗೈ ಬಂಟ ಗಿರೀಶ್ ಚಕ್ರ ಅವರನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿತ್ತು.