ಬೆಂಗಳೂರು: ನಟ ಅಭಿಷೇಕ್ರ ಹೊಸ ಸಿನಿಮಾಗೆ ಶುಭ ಕೋರಿದ್ದ ನಿಖಿಲ್ ಅವರ ನಡೆಗೆ ಮೆಚ್ಚಗೆ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರಿಗೆ ನಿಖಿಲ್ ಧನ್ಯವಾದ ತಿಳಿಸಿದ್ದಾರೆ.
ಎಸ್ಎಂಕೆ ಅವರ ಟ್ವೀಟ್ನ ಸ್ಕ್ರೀನ್ ಶಾರ್ಟ್ ಫೋಟೋವನ್ನು ಹಂಚಿಕೊಂಡಿರುವ ನಿಖಿಲ್ ಅವರು, ನನ್ನ ಮೆಸೇಜ್ ನೋಡಿ ಪ್ರತಿಕ್ರಿಯೆ ನೀಡಿದಕ್ಕೆ ಧನ್ಯವಾದಗಳು. ನಿಮ್ಮಂತಹ ಹಿರಿಯ ನಾಯಕರಿಂದ ಇಂತಹ ಮಾತುಗಳನ್ನು ಕೇಳಲು ನನಗೆ ಸಂತಸವಾಗುತ್ತಿದೆ ಎಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಿಖಿಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಭಿಷೇಕ್ ಅವರ ಹೊಸ ಸಿನಿಮಾಗೆ ಶುಭ ಕೋರಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗಮನಿಸಿದ್ದ ಎಸ್ಎಂಕೆ, ಅಭಿಷೇಕ್ ಅವರ ಹೊಸ ಸಿನಿಮಾಗೆ ಶುಭ ಕೋರಿದ್ದ ನಿಮ್ಮ ಪೋಸ್ಟ್ ನಾನು ನೋಡಿದ್ದೇನೆ. ನಿಮ್ಮ ನಡೆಯಿಂದ ಪ್ರಭಾವಿತನಾಗಿದ್ದು, ಇದನ್ನೇ ರಾಜಕೀಯ ಪ್ರಬುದ್ಧತೆ ಎಂದು ಕರೆಯುತ್ತೇವೆ. ರಾಜಕೀಯ ಬದುಕಿನಲ್ಲಿ ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ ಬದುಕು ರಾಜಕಾರಣಕ್ಕಿಂತಲೂ ದೊಡ್ಡದು. ಇದೇ ರೀತಿ ಮುಂದುವರಿದರೆ, ನಿನಗೆ ಜಯ ಖಂಡಿತ ಲಭಿಸುತ್ತದೆ ಎಂದು ಶುಭ ಹಾರೈಸಿದ್ದರು.
ಮಂಡ್ಯ ಸೋಲಿನ ನಂತರವೂ ಅಭಿಷೇಕ್ಗೆ ಶುಭ ಕೋರಿದ್ದ ನಿಖಿಲ್, ಶುಕ್ರವಾರ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಚೊಚ್ಚಲ `ಅಮರ್’ ಸಿನಿಮಾ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಥಿಯೇಟರ್ ಗಳಿಗೆ ಹೋಗಿ `ಅಮರ್’ ಚಿತ್ರವನ್ನು ನೋಡಿ. ಅಭಿ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಮೊದಲಿಗೆ ಅಭಿಷೇಕ್ಗೆ ವಿಶ್ ಮಾಡಿದ್ದರು.
ನಿಖಿಲ್ ವಿಶ್ಗೆ ಪ್ರತಿಕ್ರಿಯೆ ನೀಡಿದ್ದ ಅಭಿಷೇಕ್, ಧನ್ಯವಾದ ಗೆಳೆಯ. ನಿಜಕ್ಕೂ ಇದು ಖುಷಿಯ ವಿಚಾರ. ನಿನಗೂ ಗೊತ್ತಿರುತ್ತೆ. ಮೊದಲ ಸಿನಿಮಾ ಬಿಡುಗಡೆ ಆಗುವ ದಿನ ಹೇಗಿತ್ತು ಅನ್ನೋದು. ನಿನ್ನ ಮಾತುಗಳು ನನ್ನ ಮೇಲಿರುವ ಪ್ರೀತಿಯನ್ನ ತೋರುತ್ತದೆ. ಮತ್ತು ಕನ್ನಡ ಸಿನಿಮಾ ರಂಗದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ನಾವಿಬ್ಬರು ಇದೇ ರೀತಿ ಮುಂದುವರಿಯೋಣ. ಒಬ್ಬ ಸ್ನೇಹಿತನಾಗಿ ನಿನ್ನ ಯಶಸ್ಸನ್ನು ಸದಾ ಬಯಸುತ್ತೇನೆ. ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡ. ಏಕೆಂದರೆ ಅದು ಜೀವನದ ಭಾಗವೆಂದು ನಮಗೆ ತಿಳಿದಿದೆ.
ಮಂಡ್ಯದ ಜಿಲ್ಲೆಯ ಬಗ್ಗೆ ನಿಮ್ಮ ಮಾತುಗಳು ಬಹಳ ಪ್ರೋತ್ಸಾಹದಾಯಕವಾಗಿವೆ. ನೀನು ನನ್ನ ತಾಯಿಯ ಪ್ರಯತ್ನವನ್ನು ಬೆಂಬಲಿಸುತ್ತಾ ಮುಂದುವರಿದರೆ ನಾವು ಎಲ್ಲರೂ ಮಂಡ್ಯದ ಸುಧಾರಣೆಗೆ ಒಟ್ಟಿಗೆ ಕೆಲಸ ಮಾಡಬಹುದು. ಮಂಡ್ಯದ ಬಗ್ಗೆ ನೀವು ಹೇಳಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಲಿ. ನಿಮ್ಮ ಮಾತುಗಳಿಗೆ ಧನ್ಯವಾದಗಳು ಎಂದಿದ್ದರು.