ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ಶಾಲೆ ಬೀಗ ಮುರಿದು, ತರಗತಿ ಕೊಠಡಿಗಳಲ್ಲಿ ಹೊಸ ವರ್ಷ ಆಚರಿಸಿ ಎಣ್ಣೆ ಪಾರ್ಟಿ ಮಾಡುವ ಮೂಲಕ ಪುಂಡಾಟ ಮೆರೆದಿದ್ದಾರೆ.
ಶಾಲೆಯ ಎಲ್ಲಾ ದಾಖಲಾತಿಗಳನ್ನು ಚಲ್ಲಾಪಿಲ್ಲಿ ಮಾಡಿ, ಅಡುಗೆ ಕೋಣೆಯಲ್ಲಿನ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆಯನ್ನು ಕಳ್ಳತನ ಮಾಡಿದ್ದಾರೆ. ಜೊತೆಗೆ ಮಕ್ಕಳಿಗಾಗಿ ನೀಡಲಾಗುತ್ತಿದ್ದ ಆಹಾರ ಪರಿಕರಗಳನ್ನೂ ಕದ್ದೊಯ್ದಿದ್ದಾರೆ. ಶಾಲಾ ದಾಖಲಾತಿಗಳ ಮೇಲೆ ಮದ್ಯದ ಪೌಚ್ ಇಟ್ಟು ವಿಕೃತಿ ಮೆರೆದಿದ್ದಾರೆ. ಇದನ್ನೂ ಓದಿ: ಶಾಲೆಗೆ ಕುಡಿದು ಬರುತ್ತಿದ್ದ ಮುಖ್ಯ ಶಿಕ್ಷಕನ ಎತ್ತಂಗಡಿ ಮಾಡಿಸಿದ ಗ್ರಾಮಸ್ಥರು
ಶಾಲೆಯ ಕೊಠಡಿಗಳಲ್ಲಿ, ಆವರಣದಲ್ಲಿ ಮದ್ಯದ ಬಾಟಲ್ಗಳು, ಮಾಂಸದ ತುಂಡುಗಳು ಬಿದ್ದಿವೆ. ಘಟನೆ ಕುರಿತು ಶಾಲಾ ಮುಖ್ಯೋಪಾಧ್ಯಾಯಿನಿ ಮಾನ್ವಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಪುಂಡ ಯುವಕರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ವಿದ್ಯಾ ದೇಗುಲವನ್ನು ದುರ್ಬಳಕೆ ಮಾಡಿಕೊಂಡು ಕಳ್ಳತನ ಮಾಡಿರುವ ಪುಂಡರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು