ಚಂಡೀಗಢ: ತಮ್ಮ ಪತಿ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನವನ್ನು ಭಗವಂತ್ ಮಾನ್ (Bhagwant Mann) ಅವರಿಗೆ ಉಡುಗೊರೆಯಾಗಿ ನೀಡಿರುವುದಾಗಿ ಸಿಧು ಪತ್ನಿ ನವಜೋತ್ ಕೌರ್ (Navjot Kaur) ಹೇಳಿದ್ದಾರೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಕಾಂಗ್ರೆಸ್ (Congress) ನಾಯಕ ನವಜೋತ್ ಸಿಂಗ್ ಸಿಧು ನಡುವಿನ ಮಾತಿನ ಚಕಮಕಿಯ ನಡುವೆ ಕೌರ್ ಸರಣಿ ಟ್ವೀಟ್ಗಳ ಮೂಲಕ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ಮನೆಗೆ ಸಂಗೀತಾ ಫೋಗಟ್ – ಪೊಲೀಸರಿಂದ ಘಟನೆಯ ಮರುಸೃಷ್ಟಿ
ಸಿಧು ಅವರಿಗೇ ಪಂಜಾಬ್ನ ಚುಕ್ಕಾಣಿ ನೀಡಲು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಬಯಸಿದ್ದರು. ಆದ್ರೆ ಸಿಧು ಅವರು ತಮ್ಮ ಪಕ್ಷಕ್ಕೆ ದ್ರೋಹ ಬಗೆಯದಿರಲು ನಿರ್ಧರಿಸಿದ್ದರು. ಹಾಗಾಗಿ ಭಗವಂತ್ ಮಾನ್ ಅವರು ಸಿಎಂ ಆದರು ಎಂದು ಪತಿಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ
ಸಿಎಂ ಭಗವಂತ್ ಮಾನ್ ಅವರೇ ಮುಚ್ಚಿಟ್ಟ ರಹಸ್ಯವೊಂದನ್ನು ನಾನಿಂದು ಬಹಿರಂಗಪಡಿಸುತ್ತೇನೆ. ನೀವು ಇಂದು ಅಲಂಕರಿಸಿರುವ ಬಹಳ ಗೌರವಾನ್ವಿತ ಕುರ್ಚಿಯನ್ನು ನಿಮ್ಮ ಹಿರಿಯ ಸಹೋದರ ನವಜೋತ್ ಸಿಂಗ್ ಸಿಧು ಅವರು ನಿಮಗೆ ಉಡುಗೊರೆಯಾಗಿ ನೀಡಿರುವುದು. ನಿಮ್ಮದೇ ಹಿರಿಯ ನಾಯಕ ಪಂಜಾಬ್ ನಾಯಕತ್ವವನ್ನು ನವಜೋತ್ ಮುನ್ನಡೆಸಬೇಕು ಎಂದು ಬಯಸಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯವನ್ನ ಮುನ್ನಡೆಸಲು ಸಿಧು ಅವರನ್ನು ವಿವಿಧ ಮಾಧ್ಯಮಗಳ ಮೂಲಕ ಸಂಪರ್ಕಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
2022ರಲ್ಲಿ ಪಂಜಾಬ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನ ಸೋಲಿಸಿ ಎಎಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇದಕ್ಕೂ ಮುನ್ನ ಸಿಧು ಅವರು ಕಾಂಗ್ರೆಸ್ ತೊರೆದು ಎಎಪಿ ಸೇರಲಿದ್ದಾರೆ ಎಂಬ ವದಂತಿ ಹರಡಿತ್ತು.