ಮಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಬಿಡುಗಡಯಾಗಿ ಒಂದಿಗೆ ಒಂದು ತಿಂಗಳು ಕಳೆದಿದೆ. ಈ ಚಿತ್ರದ ಪ್ರದರ್ಶನದ ಅಬ್ಬರದ ಜೊತೆಗೆ ಚಿತ್ರ ಆರಂಭಗೊಂಡಾಗ ದೈವ ಪಾತ್ರಿಯಾಗಿ ಅಬ್ಬರಿಸಿದ ಕಲಾವಿದ ಪಬ್ಲಿಕ್ ಟಿವಿ ಕ್ಯಾಮೆರಾಕ್ಕೆ ಸಿಕ್ಕಿದ್ದು, ಸಿನಿಮಾ ಸಕ್ಸಸ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು, ವಿಶ್ವಾದ್ಯಂತ ಭಾರೀ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಭಾರತೀಯ ಸಿನಿ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಪರಭಾಷಾ ಸಿನಿಮಾಗಳಿಗೆ ನಾವೇನು ಕಮ್ಮಿ ಇಲ್ಲ ಎಂಬಂತೆ ಮುನ್ನುಗ್ಗುತ್ತಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಚಿತ್ರ ನೋಡಲು ಜನ ಮುಗಿಬೀಳುತ್ತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದನ್ನೂ ಓದಿ: ಪರಭಾಷೆಯಲ್ಲೂ 100 ಕೋಟಿ ಬಾಚಿದ ‘ಕಾಂತಾರ’: ನಿದ್ದೆಗೆಟ್ಟ ಬಾಲಿವುಡ್
ಸಿನಿಮಾದಲ್ಲಿ ರಿಷಬ್ ಶೆಟ್ಟಿ (Rishab Shetty) ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರೆ, ಉಳಿದ ಕಲಾವಿದರೂ ತಮ್ಮ ಪಾತ್ರಕ್ಕೆ ತಕ್ಕಂತೆ ಜೀವ ತುಂಬಿಸಿದ್ದಾರೆ. ಚಿತ್ರದಲ್ಲಿ ಬರುವ ಪ್ರತಿಯೊಬ್ಬ ಕಲಾವಿದರೂ ಸಿನಿಮಾದಲ್ಲಿ ಹೈಲೆಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೇ ಸಿನಿಮಾದ ಆರಂಭದಲ್ಲಿ ದೈವ ಪಾತ್ರಿಯಾಗಿ ಅಬ್ಬರಿಸಿದ ಮಂಗಳೂರಿನ ನವೀನ್ ಬೊಂದೇಲ್ (Naveen Bondel) ಅವರು ಪಬ್ಲಿಕ್ ಟಿವಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಇಡೀ ಚಿತ್ರದಲ್ಲಿ ಮೊದಲು ದೈವ ದರ್ಶನ ಕಾಣಸಿಗುವುದು ಕಾಡಿನ ಮಧ್ಯದಲ್ಲಿ ದೈವ ಪಾತ್ರಿಯಲ್ಲಿ. ವಿಶೇಷವೆಂದರೆ ಈ ಸಿನಿಮಾದ ದೈವ ಪಾತ್ರಿಯಾಗಿ ಬಣ್ಣ ಹಚ್ಚಿದವರು ಮಂಗಳೂರಿನ ಸಿಟಿ ಬಸ್ನಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ವಿಭಿನ್ನ ಕಣ್ಣಿನಿಂದಲೇ ಚಿತ್ರಕ್ಕೆ ಆಯ್ಕೆಯಾಗಿ ತಮ್ಮ ಸಣ್ಣ ಪಾತ್ರದಲ್ಲಿಯೇ ಜನರ ಗಮನ ಸೆಳೆದಿದ್ದಾರೆ.
ಸದ್ಯ ಸಿನಿಮಾ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಈ ಪಾತ್ರವನ್ನು ಸೃಷ್ಟಿಸಿದವರು ರಿಷಬ್ ಶೆಟ್ಟಿ, ನಾನು ಕೇವಲ ನಟನೆಯಷ್ಟೇ ಮಾಡಿದ್ದೇನೆ. ಇದರ ಯಶಸ್ಸು ರಿಷಬ್ ಶೆಟ್ಟಿ ಅವರಿಗೆ ಸಲ್ಲಬೇಕು. ಒಬ್ಬ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರೇ ನನ್ನ ಪಾತ್ರವನ್ನು ಹೇಗೆ ಮಾಡಬೇಕು ಎಂದು ಹೇಳಿಕೊಡಬೇಕಾದರೆ, ನಾನೊಬ್ಬ ಕಲಾವಿದನಾಗಿ ನಾನು ಇನ್ನಷ್ಟು ಚೆನ್ನಾಗಿ ಅಭಿನಯಿಸಬೇಕೆಂದು ನಟಿಸಿದ್ದೇನೆ. ದೈವದ ಕೃಪೆಯಿಂದ ಇಂದು ಕಾಂತಾರ ಸಿನಿಮಾದ ಎಲ್ಲಾ ಪಾತ್ರಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ದೈವ ಪಾತ್ರವನ್ನು ನಾನು ಅಂದು ಹೇಗೆ ನಿಭಾಯಿಸಿದೆ ಎಂಬುವುದನ್ನು ಇಂದಿಗೂ ಹೇಳಲು ಆಗುತ್ತಿಲ್ಲ. ಅದರ ಅನುಭವವೇ ಬೇರೆ ಎಂದಿದ್ದಾರೆ. ಇದನ್ನೂ ಓದಿ: ಕಾಂತಾರ ‘ವರಾಹ ರೂಪಂ’ ಹಾಡಿಗೆ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ
ನನಗೆ ಕುಂದಾಪುರದಲ್ಲಿ ಕೇವಲ ಒಂದು ದಿನವಷ್ಟೇ ಶೂಟಿಂಗ್ ಇತ್ತು. ಈ ವೇಳೆ ಭಾರೀ ಮಳೆ, ಚಳಿ ಇತ್ತು. ಕೇವಲ ಒಂದು ಟವೆಲ್ ಸುತ್ತಿಕೊಂಡು, ವಿಗ್ ಧರಿಸಿದ್ದೆ, ಮೇಕಪ್ ನಂತರ ಚಪ್ಪಲಿ ಕೂಡ ಹಾಕಿಕೊಳ್ಳುತ್ತಿರಲಿಲ್ಲ. ಕಾಡಿನಲ್ಲಿ ಬಹಳ ತಿಗಣೆ ಇತ್ತು. ಈ ವೇಳೆ ನಮಗೆ ಬಹಳ ಕಷ್ಟವಾಗುತ್ತಿತ್ತು. ಈ ವೇಳೆ ಪ್ರೊಡಕ್ಷನ್ ಅವರ ಕಡೆಯಿಂದ ಉಪ್ಪನ್ನು ತಂದು ಕಾಲಿಗೆ ಹಾಕಿಕೊಳ್ಳುತ್ತಿದ್ದೇವು ಎಂದು ಚಿತ್ರೀಕರಣದ ಸಮಯದಲ್ಲಿ ತಮಗಾದ ಅನುಭವನ್ನು ಹಂಚಿಕೊಂಡಿದ್ದಾರೆ.
ನನ್ನ 12 ವರ್ಷದ ಸಿನಿ ಪಯಣದಲ್ಲಿ ಕಾಂತಾರ ಸಿನಿಮಾದಷ್ಟು ಉತ್ತಮ ತಂಡವನ್ನು ನೋಡಿರಲಿಲ್ಲ. ಖುಷಿಯಾಗುತ್ತಿದೆ. ಮತ್ತೊಮ್ಮೆ ಈ ತಂಡದಲ್ಲಿ ಅವಕಾಶ ಸಿಕ್ಕರೆ ಅಭಿನಯಿಸುತ್ತೇನೆ ಎಂದಿದ್ದಾರೆ.