– ರಾಜ್ಯಾಧ್ಯಕ್ಷರೂ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಂಧನ
ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸದಿರಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ಅವರ ಕಚೇರಿ ಮತ್ತು ಮನೆಗೆ ಮುತ್ತಿಗೆ ಹಾಕಿದೆ.
ಈಗಾಗಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಒಲವು ತೋರುತ್ತಿರುವುದು ಕಾಣುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಳವಾಗಿ ಅಧ್ಯಯನ ನಡೆಸಿದರೆ ಅದರಲ್ಲಿ ಆಕರ್ಷಕ ಪದಗಳನ್ನು ಬಿಟ್ಟು ಪ್ರಾಯೋಗಿಕವಾಗಿ ಜಾರಿಗೊಳಿಸುವ ಪೂರಕವಾದ ಅಂಶಗಳಿಲ್ಲ. ಈ ನೀತಿಯು ಏಕ ಸಂಸ್ಕೃತಿ , ಸಿದ್ಧಾಂತವನ್ನು ಹೇರಿಕೆ ಮಾಡುವ ದೂರದೃಷ್ಟಿಯನ್ನು ಹೊಂದಿದೆ ಎಂಬುದು ಬಹಿರಂಗವಾಗಿದೆ. ವಿವಿಧ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು, ಜೀವನಶೈಲಿಗಳಲ್ಲಿ ಬದುಕುವ “ವಿವಿಧತೆಯಲ್ಲಿ ಏಕತೆ” ಸಾರುವ ಜಾತ್ಯತೀತ ಭಾರತದಲ್ಲಿ ಏಕ ನೀತಿ ಹೇರಿಕೆ ಅಸಾಧ್ಯ ಮತ್ತು ಅಸಂವಿಧಾನಿಕವಾಗಿದೆ.
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಆಲೋಚನೆಯು ಶಿಕ್ಷಣದ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವು ಆಗಿದೆ. ಶಿಕ್ಷಣವೆಂಬುದು ದೇಶದ ಸಮವರ್ತಿ ವ್ಯಾಪ್ತಿಗೆ ಬರುವಂತಹದ್ದು, ವಿಕೇಂದ್ರೀಕರಣದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾದೇಶಿಕತೆಗೆ ಹೆಚ್ಚು ಒತ್ತು ಕೊಡುವ ಬಗ್ಗೆ ಸಂವಿಧಾನವೇ ಪ್ರತಿಪಾದಿಸುತ್ತದೆ. ಆದರೆ ಹೊಸದಾಗಿ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಉದ್ದೇಶಪೂರ್ವಕವಾಗಿಯೇ ಪ್ರಾದೇಶಿಕತೆಗೆ ಧಕ್ಕೆ ತರಲಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ ಹಿಂದಿಯನ್ನು ಹಿಂಬದಿಯಿಂದ ಹೇರಿಸಿ ಹಿಂದುತ್ವ ಫ್ಯಾಶಿಸಂ ಮಾರಕ ಸಿದ್ಧಾಂತದ ಭಾಗವಾಗಿ ಈ ಎಲ್ಲಾ ಪ್ರಯತ್ನಗಳು ಸರ್ಕಾರವು ಮಾಡುತ್ತಿದೆ. ವೈಜ್ಞಾನಿಕ ದೂರದೃಷ್ಟಿ ಇಲ್ಲದೆ ಘೋಷಣೆಗಳಿಗೆ ಮಾತ್ರ ಸೀಮಿತವಾಗಿರುವ ಮತ್ತು ದೇಶದ ವೈವಿಧ್ಯತೆಗೆ ಬೆದರಿಕೆಯಾಗಿರುವ ಈ ಶಿಕ್ಷಣ ನೀತಿಯನ್ನು ಸೌಹಾರ್ದತೆಯ ಕರ್ನಾಟಕದ ಮಣ್ಣಿನಲ್ಲಿ ಕಾರ್ಯರೂಪಕ್ಕೆ ತರಲು ಕ್ಯಾಂಪಸ್ ಫ್ರಂಟ್ ಒಪ್ಪಲ್ಲ. ಇದು ಕೇವಲ ಬಂಡವಾಳಶಾಹಿ ಕಾರ್ಪೊರೇಟ್ ಕುಳಗಳ ಹಿತ ಕಾಪಾಡಲು ತಂದಿರುವ ನೀತಿಯಾಗಿದ್ದು ಇದನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಲಿದ್ದೇವೆ.
ಒಂದು ವೇಳೆ ನಮ್ಮ ಬೇಡಿಕೆಯನ್ನು ಪರಿಗಣಿಸದೇ ಈ ಪೊಳ್ಳು ಭರವಸೆಗಳ ಕರಡನ್ನು ರಾಜ್ಯ ಸರ್ಕಾರವು ಜಾರಿಗೊಳಿಸಲು ಮುಂದಾದರೆ ಕ್ಯಾಂಪಸ್ ಫ್ರಂಟ್ ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಶಿಕ್ಷಣದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಕಾಪಾಡಲಿಕ್ಕೆ ಬೇಕಾಗಿ ಇಂದು ಉನ್ನತ ಶಿಕ್ಷಣ ಸಚಿವರ ಕಛೇರಿಗೆ ಮಾರ್ಚ್ ಮಾಡುವ ಮೂಲಕ ಎಚ್ಚರಿಸಿದ್ದೇವೆ, ಸರ್ಕಾರ ತನ್ನ ನಿಲುವು ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಕ್ಯಾಂಪಸ್ ಫ್ರಂಟ್ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನೂತನ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದ ವೇಗದ ಕ್ರಮ: ಕಸ್ತೂರಿ ರಂಗನ್ ಶ್ಲಾಘನೆ
ರಾಜ್ಯಾಧ್ಯಕ್ಷ, ಕಾರ್ಯದರ್ಶಿ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಂಧನ ಈ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮಾತಿಗೆ ಯಾವುದೇ ರೀತಿ ಸ್ಪಂದನೆ ಮಾಡದೆ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಆಥಾವುಲ್ಲ ಪುಂಜಾಲಕಟ್ಟೆ, ಕಾರ್ಯದರ್ಶಿ ಸರ್ಪರಾಝ್ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.