ಮೈಸೂರು: ನಾಡಹಬ್ಬ ಮೈಸೂರು ದಸರಾ 2026ರ (Mysuru Dadara Elephant) ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಜಂಬೂ ಸವಾರಿ ತಾಲೀಮಿಗೆ ದಸರಾ ಗಜಪಡೆಗಳು ಸಜ್ಜಾಗುತ್ತಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.
ಮೈಸೂರಿನ ಧನ್ವಂತರಿ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ದಸರಾ ಗಜಪಡೆಯ ಆನೆಗಳ ತೂಕ ಪರೀಕ್ಷೆ (Elephants Weight Test) ನಡೆಸಲಾಯಿತು. ಈ ಬಾರಿ ಮೊದಲ ಹಂತದಲ್ಲಿ ಆಗಮಿಸಿರುವ ಧನಂಜಯ, ಪ್ರಶಾಂತ, ಮಹೇಂದ್ರ, ಏಕಲವ್ಯ, ಗೋಪಿ, ಶ್ರೀಕಂಠ, ಲಕ್ಷ್ಮೀ, ಕಾವೇರಿ ಹಾಗೂ ಶ್ರೀರಾಮ ಆನೆಗಳ ತೂಕ ಪರಿಶೀಲಿಸಲಾಯಿತು.

9 ಆನೆಗಳ ತೂಕ – ಶ್ರೀಕಂಠನೇ ಹೆಚ್ಚು ಬಲಶಾಲಿ
* ಶ್ರೀಕಂಠ – 5,790 ಕೆಜಿ
* ಏಕಲವ್ಯ – 5,600 ಕೆಜಿ
* ಧನಂಜಯ – 5,530 ಕೆಜಿ
* ಮಹೇಂದ್ರ – 5,490 ಕೆಜಿ
* ಪ್ರಶಾಂತ – 5,205 ಕೆಜಿ
* ಗೋಪಿ – 5,170 ಕೆಜಿ
* ಶ್ರೀರಾಮ – 4,820 ಕೆಜಿ
* ಲಕ್ಷ್ಮೀ – 3,990 ಕೆಜಿ
* ಕಾವೇರಿ – 3,075 ಕೆಜಿ
9 ಆನೆಗಳ ಪೈಕಿ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾನೆ. ಕಾವೇರಿ 3,075 ಕೆಜಿ ತೂಕದೊಂದಿಗೆ ಕೊನೆಯ ಸ್ಥಾನದಲ್ಲಿದ್ದಾಳೆ.

ಇಂದಿನಿಂದ ಸವಾರಿ ತಾಲೀಮು
ಮೈಸೂರು ಅರಮನೆಯಿಂದ ದಸರಾ ಗಜಪಡೆಗಳ ಜಂಬೂ ಸವಾರಿ ತಾಲೀಮು ಆರಂಭವಾಗಲಿದೆ. ಈ ಬಾರಿ ದಸರಾ ಗಜಪಡೆಗೆ ಕ್ಯಾಪ್ಟನ್ ಆಯ್ಕೆ ಮಾಡಲಾಗಿಲ್ಲ. ತಾಲೀಮಿನ ಮೂಲಕ ಆನೆಗಳ ಸಾಮರ್ಥ್ಯವನ್ನ ಪರಿಶೀಲಿಸಿ, ಹಂತ ಹಂತವಾಗಿ ಅಂಬಾರಿ ಹೊರುವ ಆನೆಯನ್ನ ಆಯ್ಕೆ ಮಾಡಲಾಗುತ್ತದೆ. ಆನೆಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತೂಕ ಹೆಚ್ಚಿಸುವುದಕ್ಕಿಂತ ಆನೆಗಳ ಆರೋಗ್ಯ ಕಾಪಾಡುವುದು ಮುಖ್ಯ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ಪ್ರಭುಗೌಡ ಮಾತನಾಡಿ, ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ಇಂದು ಸಂಜೆಯಿಂದಲೇ ಹಂತ ಹಂತವಾಗಿ ತಾಲೀಮು ನಡೆಸಲಾಗುತ್ತದೆ. ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆಯನ್ನ ಆಯ್ಕೆ ಮಾಡಲಾಗುತ್ತದೆ. ನಮ್ಮಲ್ಲಿರುವ ಎಲ್ಲಾ ಆನೆಗಳು ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ ಹಾಗೂ ಅನುಭವಿ ಆನೆಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಆನೆಗಳಿಗೆ ಯಾವ ಪ್ರಮಾಣದಲ್ಲಿ ಆಹಾರ ನೀಡಬೇಕು ಎಂಬುದನ್ನೂ ತಾಲೀಮು ಮತ್ತು ಆರೋಗ್ಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಆನೆಗಳ ವೀಕ್ಷಣೆಗೆ ಟಿಕೆಟ್ ಇಲ್ಲ
ದಸರಾ ಆನೆಗಳನ್ನು ವೀಕ್ಷಿಸಲು ಯಾವುದೇ ರೀತಿಯ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಆನೆಗಳ ಬಳಿ ಸಾರ್ವಜನಿಕರು ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಯಾರಾದರೂ ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ಪ್ರಭುಗೌಡ ಎಚ್ಚರಿಕೆ ನೀಡಿದ್ದಾರೆ. ಗಜಪಡೆಗಳಿಗೆ ಪೊಲೀಸ್ ಬಿಗಿ ಭದ್ರತೆಯನ್ನೂ ಒದಗಿಸಲಾಗಿದೆ.
