– ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ
ಮೈಸೂರು: ಪಕ್ಷದ ವರಿಷ್ಠರು ಹಲವು ದೂರದೃಷ್ಟಿಯಿಂದ ಅಧಿಕಾರ ನೀಡಿದ್ದಾರೆ. ಅದು ಯಾವ ಕಾರಣಕ್ಕೆ ಅನ್ನೋದು ನನಗೂ ಗೊತ್ತಿಲ್ಲ. ಇದು ಬಯಸದೇ ಬಂದ ಭಾಗ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ನನಗೆ ಪಶ್ಚಿಮ ಮಹಾರಾಷ್ಟ್ರದ ಜವಾಬ್ದಾರಿ ನೀಡಲಾಗಿದೆ. ಅಲ್ಲಿನ 6 ರಿಂದ 7 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರತಿಪಕ್ಷಗಳು ಸವದಿಯ ಬಗ್ಗೆ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕಾಗಿ ಅವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ. ದಂಡ ಹಾಕುವುದು ರಸ್ತೆ ಸರಿಯಿಲ್ಲ ಎಂದು ಅಲ್ಲ. ಸಂಚಾರಿ ನಿಯಮ ಉಲ್ಲಂಘನೆಗಾಗಿ ದಂಡ ಹಾಕುವುದು. ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧ ಕಲ್ಪಿಸಬೇಡಿ. ಯಾರು ತಪ್ಪು ಮಾಡುತ್ತಾರೆ ಅವರಿಗೆ ದಂಡ ಹಾಕುತ್ತಾರೆ. ಅದರಲ್ಲಿ ಹೆಚ್ಚು ಕಮ್ಮಿ ಏನು ಇಲ್ಲ. ಸಂಚಾರ ನಿಯಮ ಪಾಲಿಸಿದರೆ ದಂಡ ಕಟ್ಟುವ ಪ್ರಶ್ನೆಯೇ ಇರುವುದಿಲ್ಲ ಎಂದು ಸವದಿ ಹೇಳಿದರು.
ರಾಜ್ಯದಲ್ಲಿ ಎಲೆಕ್ಟ್ರಿಕಲ್ ಬಸ್ ಸಂಚಾರ ಜಾರಿಗೆ ಚಿಂತನೆ ಮಾಡಲಾಗಿದೆ. ಹೊರದೇಶಗಳಿಂದ ಪ್ರಪೋಸಲ್ ಬಂದಿದೆ. ಶೂನ್ಯ ಬಂಡವಾಳ ಹೂಡಿಕೆ ಮಾಡಿ 40% ಮತ್ತು 60% ರಂತೆ ಆದಾಯದಲ್ಲಿ ನಮಗೆ ಕೊಡುತ್ತಾರೆ. ಬಸ್ಗಳನ್ನು ಅವರೇ ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತಾರೆ. ಈ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ತೈಲ ಬೆಲೆ ಹೆಚ್ಚಳವಾದ ಹಿನ್ನೆಲೆ ಬಸ್ ದರ ಏರಿಸುವ ಪ್ರಸ್ತಾವಣೆ ನನ್ನ ಮುಂದಿದೆ. ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳದ ಉದ್ದೇಶ ಇಲ್ಲ ಎಂದು ತಿಳಿಸಿದರು.