ಹಾಸನ: ಇಲ್ಲಿನ ದಾಸರಕೊಪ್ಪಲಿನಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೊಸ ವರ್ಷದ ಆಚರಣೆಗೆ ಪ್ರಿಯಕರನನ್ನು ಮನೆಗೆ ಕರೆಸಿ ಆತನಿಂದಲೇ ಮಹಿಳೆ ಹತ್ಯೆಯಾಗಿರುವುದು ಪೊಲೀಸರ (Police) ತನಿಖೆಯಲ್ಲಿ ಬಯಲಾಗಿದೆ.
ದಾಸರಕೊಪ್ಪಲಿನ ಶಿವಮ್ಮ ಹಾಗೂ ಆಕೆಯ ಮಕ್ಕಳಾದ ಪವನ್ (10) ಹಾಗೂ ಸಿಂಚನ (7) ಜ.2 ರಂದು ಹಾಸನ (Hassan) ನಗರದಲ್ಲಿದ್ದ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈಗ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಆಕೆಯ ಪ್ರಿಯಕರನೇ ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಿಜಯಪುರ ಮೂಲದ ಆರೋಪಿ ನಿಂಗಪ್ಪ ಕಾಗವಾಡಿ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: MBA ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ
ಕೆಲ ತಿಂಗಳ ಹಿಂದೆ ಬಿಜಾಪುರದಲ್ಲಿ (Bijapur) ಶಿವಮ್ಮಳ ಪತಿ ತೀರ್ಥಪ್ರಸಾದ್ ಬೇಕರಿ ನಡೆಸುತ್ತಿದ್ದರು. ಈ ಸಮಯದಲ್ಲಿ ಶಿವಮ್ಮಳಿಗೆ ನಿಂಗಪ್ಪ ಪರಿಚಯವಾಗಿದ್ದ. ಬಳಿಕ ಶಿವಮ್ಮಳ ಪತಿ ತುಮಕೂರಿನಲ್ಲಿ ಬೇಕರಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದ. ಈ ವೇಳೆ ನಿಂಗಪ್ಪ ಮಹಿಳೆಯ ಜೊತೆ ಸಲುಗೆ ಬೆಳೆಸಿದ್ದು, ಮನೆಗೆ ಬಂದು ಉಳಿದು ಹೋಗುತ್ತಿದ್ದ. ಅಲ್ಲದೇ ಮನೆಯಲ್ಲಿ ನಿಂಗಪ್ಪನನ್ನು ಕಾರು ಚಾಲಕ ಎಂದು ಮಹಿಳೆ ಪರಿಚಯ ಮಾಡಿಕೊಟ್ಟಿದ್ದಳು ಎಂದು ತಿಳಿದು ಬಂದಿದೆ.
ಹೊಸ ವರ್ಷದ ಆಚರಣೆಗೆ ಮಹಿಳೆ ನಿಂಗಪ್ಪನನ್ನು ತನ್ನ ಮನೆಗೆ ಕರೆಸಿದ್ದಳು. ಇದಕ್ಕಾಗಿ ಬಂದಿದ್ದ ಆರೋಪಿ ಡಿ.31ರ ರಾತ್ರಿ ಮಹಿಳೆಯ ಮನೆಯಲ್ಲೇ ಕಾಲಕಳೆದಿದ್ದ. ಅಲ್ಲದೇ ಜ.1ರ ಸಂಜೆ ಮನೆಗೆ ಬರುವುದಾಗಿ ಪತ್ನಿ ಶಿವಮ್ಮಗೆ ಪತಿ ತೀರ್ಥಪ್ರಸಾದ್ ಫೋನ್ ಮಾಡಿ ಹೇಳಿದ್ದ. ಈ ವಿಚಾರ ತಿಳಿದಿದ್ದ ನಿಂಗಪ್ಪ, ಶಿವಮ್ಮನನ್ನು ಕತ್ತುಹಿಸುಕಿ ಕೊಂದು ನಂತರ ಇಬ್ಬರು ಮಕ್ಕಳನ್ನು ಕತ್ತುಹಿಸುಕಿ ಕೊಲೆಗೈದಿದ್ದ. ಬಳಿಕ ಸಿಲಿಂಡರ್ ಪೈಪ್ ಕಿತ್ತು ಅನಿಲ ಸೋರಿಕೆಯಿಂದ ಸಾವು ಸಂಭವಿಸಿದೆ ಎಂಬಂತೆ ಬಿಂಬಿಸಿದ್ದ. ಅಲ್ಲದೇ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ, ತಾಳಿ, ಕಾಲು ಚೈನು ಹಾಗೂ ಮೊಬೈಲ್ನ್ನು ದೋಚಿಕೊಂಡು ಹೊರಗಡೆಯಿಂದ ಡೋರ್ ಲಾಕ್ ಮಾಡಿ ಪರಾರಿಯಾಗಿದ್ದ.
ಆ ದಿನ ಸಂಜೆ ಮನೆಗೆ ಬಂದಾಗ ಪತಿಗೆ ಶಿವಮ್ಮ ಹಾಗೂ ಮಕ್ಕಳಿಲ್ಲದ ಬಗ್ಗೆ ಅನುಮಾನ ಬಂದು, ಮರುದಿನ ಬೇರೆ ಕೀ ಬಳಸಿ ಬೀಗ ತೆಗೆದಾಗ ಕೃತ್ಯ ಬಯಲಾಗಿತ್ತು. ಮೂವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಶಿವಮ್ಮಳ ತಾಯಿ ಹುಲಿಯಮ್ಮ ಹಾಗೂ ಪತಿ ತೀರ್ಥ ಪ್ರಸಾದ್ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಲಿಂಗಪ್ಪ ಚಿನ್ನಾಭರಣದ ಆಸೆಗೆ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪ್ರೇಮಿಗಳೆಂದು ಅಕ್ಕ-ತಮ್ಮನನ್ನು ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು