ಕೋಲಾರ: ಸಮಸ್ಯೆ ಕುರಿತು ದೂರು ನೀಡಲು ಹೋಗಿದ್ದ ವ್ಯಕ್ತಿಯ ಮೇಲೆ ಕೆಜಿಎಫ್ ನಗರಸಭೆಯ ಕಾಂಗ್ರೆಸ್ ಸದಸ್ಯನೋರ್ವ ಹಲ್ಲೆ ಮಾಡಿ ಗೂಂಡಾ ವರ್ತನೆ ತೋರಿದ ಘಟನೆ ನಗರಸಭೆ ಆಯುಕ್ತರ ಕಚೇರಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಭಾಸ್ಕರ್ ಹಲ್ಲೆಗೊಳಗಾದ ವ್ಯಕ್ತಿ. ಕಾಲುವೆ ತೆರವುಗೊಳಿಸುವಂತೆ ಕೆಜಿಎಫ್ ನಗರಸಭೆಗೆ ಭಾಸ್ಕರ್ ದೂರು ನೀಡಲು ತೆರಳಿದ್ದರು. ಈ ವೇಳೆ ನಗರಸಭೆ ವಾರ್ಡ್ ನಂ 33 ರ ಕಾಂಗ್ರೆಸ್ ಸದಸ್ಯ ಸ್ಟಾನ್ಲಿ ದೂರು ನೀಡಲು ಬಂದಿದ್ದ ಭಾಸ್ಕರ್ ಮೇಲೆ ಮನಬಂದತೆ ಹಲ್ಲೆ ನಡೆಸಿದ್ದಾನೆ. ಇದಲ್ಲದೇ ಆತನ ಸಹಚರರು ಕೂಡ ನಗರಸಭೆ ಆವರಣದಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಭಾಸ್ಕರ್ ರನ್ನು ಕೆಜಿಎಫ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಸಹ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಪೊಲೀಸರ ನಡೆಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಘಟನೆ ರಾಬರ್ಟ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಟಾನ್ಲಿಯು ಭಾಸ್ಕರ್ ಗೆ ನಗರಸಭೆಯ ಆಯುಕ್ತ ಶ್ರೀಕಾಂತ್ ಎದುರಲ್ಲೆ ಹಲ್ಲೆ ನಡೆಸಿದ್ದ ಸಿಸಿಟಿಯ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿಯಾದ್ರೂ ಪೊಲೀಸರು ಗೂಂಡಾಗಿರಿ ಮೆರೆದ ಕಾಂಗ್ರೆಸ್ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv