ಕಾರವಾರ: ಒಂದು ಕಪಾಲಿಗೆ (ಕಪಾಳ) ಹೊಡೆದರೇ ಇನ್ನೊಂದು ಕಪಾಲು ತೋರಿಸುವ ಸಂತಾನ ನಮ್ಮದಲ್ಲ, ಒಂದು ಕಪಾಲು ಹೊಡೆದರೇ ನಿಮ್ಮ ತಲೆಯನ್ನೇ ತೆಗೆಯುವ ಸಂತಾನದವರು ನಾವು. ನಮ್ಮದು ವೀರ ಸಂತಾನ, ಹೇಡಿಗಳ ಸಂತಾನ ಅಲ್ಲ ಎಂದು ಮತ್ತೆ ಸಿಎಂ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ (Anant Kumar Hegade) ಕಿಡಿಕಾರಿದ್ದಾರೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮಮ್ಮ ತನ್ನ ಎದೆಹಾಲು ಕುಡಿಸಿ ಬೆಳೆಸಿದ್ದು, ಬೇವರ್ಸಿ ಹಾಲನ್ನಲ್ಲ. ತಾಯಿ ಹಾಲು ಕುಡಿದಿದ್ದಕ್ಕೆ ಗಂಡುಭಾಷೆ ಜನ್ಮದಿಂದ ಬಂದಿದೆ. ಏಕವಚನದಲ್ಲಿ ನೀವು ಮಾತನಾಡಿದ್ರೆ ನಾವೂ ಏಕವಚನದಲ್ಲಿ ಮಾತನಾಡುತ್ತೀವಿ. ಸಿದ್ದರಾಮಯ್ಯನವರೇ ನೀವು ಸಭ್ಯತೆ ಬಗ್ಗೆ ಕಲಿತುಕೊಳ್ಳಿ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ?: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅನಂತ್ ಕುಮಾರ್ ಹೆಗಡೆ
ವಿಧಾನಸಭೆಯಲ್ಲಿ ನೀವು ಶಾಸಕರಿಗೆ, ಪತ್ರಕರ್ತರಿಗೆ ಯಾವ ರೀತಿ ಏಕವಚನದಲ್ಲಿ ಮಾತನಾಡುತ್ತೀರಿ. ನಮ್ಮ ಹತ್ರ ತಾಕತ್ ಇಲ್ವಾ ನಮಗೆ ಮಾತನಾಡಲು ಬರೋದಿಲ್ವ?. ಟಿವಿಯಲ್ಲಿ ಚರ್ಚೆ ನಡಿಯುತ್ತಿದೆ, ನಡೀಲಿ. ಈಶ್ವರನಿಗೆ ರುದ್ರಾಭಿಶೇಕ ನಡೆಯುತ್ತಿದೆ, ನಡೆಯಲಿ. ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಜೀವ ಇರೋ ತನಕ ತಲೆ ತಗ್ಗಿಸಲು ಸಾಧ್ಯವಿಲ್ಲ. ನಾನೇನಾದ್ರು ತಲೆ ತಗ್ಗಿಸಿದ್ರೆ ನೀವು ಹಾಕಿದ ವೋಟಿಗೆ ಅಪಮಾನ, ಯಾರು ಕುಣಿತಾರೋ ಕುಣಿದುಕೊಂಡು ಹೋಗಲಿ. ತಾಂಡವ ನೃತ್ಯ ನಮ್ಮವರಿಗೂ ಬರುತ್ತೆ ಎಂದು ಮತ್ತೆ ವಿವಾದ ಕಿಡಿ ಹೊತ್ತಿಸಿದ್ರು.