– ನೀಟ್ ಕುರಿತು ಚರ್ಚೆಯಿಂದ ಹಿಂದೆ ಸರಿಯುವುದು ತಪ್ಪು ಸಂದೇಶ: ರಿಜಿಜು
– ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿಪಕ್ಷಗಳು ಪಟ್ಟು
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ 5ನೇ ದಿನವೂ ಲೋಕಸಭೆಯಲ್ಲಿ (Lok Sabha) ʻನೀಟ್ʼ (NEET) ಕುರಿತು ಗದ್ದಲ ಮುಂದುವರಿದ ಹಿನ್ನೆಲೆ, ಕಲಾಪವನ್ನ ಸೋಮವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಗಿದೆ.
ಹೌದು. ಸಂಸತ್ತಿನ ಮುಂಗಾರು ಅಧಿವೇಶನದ 5ನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ (Rajya Sabha) ತೀವ್ರ ಗದ್ದಲ ಮುಂದುವರಿಯಿತು. ನೀಟ್ (NEET) ಪರೀಕ್ಷೆ ವಿವಾದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಭಟನೆ ನಡೆಸಿದವು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಚರ್ಚೆಗೆ ಸರ್ಕಾರ ಸಮ್ಮತಿ ನೀಡಿದ್ದರೂ, ಚರ್ಚೆಗೆ ಮುನ್ನವೇ ʻಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕುʼ ಎಂದು ವಿಪಕ್ಷಗಳು ಪಟ್ಟು ಹಿಡಿದು ಘೋಷಣೆ ಕೂಗಿದವು. ಈ ಹಿನ್ನೆಲೆ ಲೋಕಸಭೆಯ ಸದನವನ್ನ ಸೋಮವಾರದ ವರೆಗೆ (ಜು.27) ಮುಂದೂಡಲಾಯಿತು.

ಲೋಕಸಭೆ ಸದನ ಮುಂದೂಡಿಕೆ
ಇಂದು ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಸದನ ಪುನಾರಂಭಗೊಂಡ ಕೆಲವೇ ಕ್ಷಣಗಳಲ್ಲಿ ವಿಪಕ್ಷ ಸದಸ್ಯರು ʻEducation Minister Resignʼ, ʻಇಸ್ತೀಫಾ, ಇಸ್ತೀಫಾʼ ಎಂದು ಘೋಷಣೆ ಕೂಗಿದರು. ಇದರಿಂದ ಸದನದಲ್ಲಿ ಭಾರೀ ಗದ್ದಲ ಉಂಟಾಗಿ, ಲೋಕಸಭೆಯ ಕಲಾಪವನ್ನು ಸೋಮವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಯಿತು.
ನೀಟ್ ಕುರಿತು ಚರ್ಚೆಯಿಂದ ಹಿಂದೆ ಸರಿಯುವುದು ತಪ್ಪು ಸಂದೇಶ: ಕಿರಣ್ ರಿಜಿಜು
ಇದಕ್ಕೂ ಮುನ್ನ ಕೇಂದ್ರ ಸಚಿವ ಕಿರಣ್ ರಿಜಿಜು, ನೀಟ್ ವಿಚಾರದಲ್ಲಿ ಚರ್ಚೆ ನಡೆಯಲು ವಿರೋಧ ಪಕ್ಷಗಳು ಸಹಕರಿಸಬೇಕು ಎಂದು ಲೋಕಸಭೆಯಲ್ಲಿ ಮನವಿ ಮಾಡಿದರು. ನೀಟ್ ವಿಷಯದ ಬಗ್ಗೆ ಚರ್ಚೆ ನಡೆಸುವುದನ್ನ ತಪ್ಪಿಸಲು ಕಾರಣಗಳನ್ನ ಹುಡುಕಿದರೆ, ಅದು ದೇಶಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಹೇಳಿದರು.

ಸದನ ಸುಗಮವಾಗಿ ನಡೆಯಲು ಅವಕಾಶ ನೀಡಿ: ಅಧ್ಯಕ್ಷರ ಮನವಿ
ಇನ್ನೂ ಸದನದ ಅಧ್ಯಕ್ಷತೆ ವಹಿಸಿದ್ದ ಜಗದಂಬಿಕಾ ಪಾಲ್, ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ಕೈಬಿಟ್ಟು ಸದನ ಸುಗಮವಾಗಿ ನಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು. ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ ಅವರು, ತಮ್ಮ ಆಕ್ಷೇಪಣೆಗಳನ್ನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಗಮನಕ್ಕೆ ತಂದು ಸದನದಲ್ಲಿ ಶಾಂತಿ ಕಾಪಾಡುವಂತೆ ಸದಸ್ಯರನ್ನು ಕೋರಿದರು.
ಆದಾಗ್ಯೂ ಲೋಕಸಭೆಯಲ್ಲಿ ವಿಪಕ್ಷ ಸದಸ್ಯರು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆ ಸ್ಪೀಕರ್ ಕಲಾಪ ಮುಂದೂಡಿದರು.
