ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಬರುವ ಕಳ್ಳರು ಕ್ಷಣಾರ್ಧದಲ್ಲಿ ಅಂಗಡಿಯಲ್ಲಿರುವ ವಸ್ತುಗಳನ್ನ ಎಗರಿಸಿ ಬಿಡುತ್ತಾರೆ. ಅದನ್ನು ತೋರಿಸಿ ಇದನ್ನು ತೋರಿಸಿ ಎಂದು ಕೇಳುತ್ತಾ ರೆಪ್ಪೆ ಮಿಟಕಿಸುವಷ್ಟರಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ. ಇಂಥದೊಂದು ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಮೂರು ಸಾವಿರ ಮಠದ ಬಳಿ ಇರುವ ಶ್ರೀಸಾಯಿ ಪ್ಲೈವುಡ್ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಪ್ಲೈವುಡ್ಗಳನ್ನು ವಿಚಾರಿಸಿ ಮತ್ತೆ ಬೇರೆ ಕ್ವಾಲಿಟಿ ತೋರಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ಅಂಗಡಿ ಮಾಲೀಕ ಸುರೇಶ್ ಇನ್ನಷ್ಟು ಬೇರೆ ಪ್ಲೈವುಡ್ಗಳನ್ನು ತರಲು ಒಳಗಡೆ ಹೋಗಿದ್ದಾರೆ. ಈ ಸಮಯವನ್ನೇ ಕಾಯುತ್ತಿದ್ದ ವ್ಯಾಪಾರದ ಸೋಗಿನಲ್ಲಿ ಬಂದಿದ್ದ ಕಳ್ಳ ಕೌಂಟರ್ನಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಫೋನನ್ನು ಕದ್ದು ಪರಾರಿಯಾಗಿದ್ದಾನೆ.
ಅಷ್ಟರಲ್ಲಿ ಅಂಗಡಿ ಮಲೀಕ ಸುರೇಶ ಬೇರೆ ಕ್ವಾಲಿಟಿ ಪ್ಲೈವುಡ್ ತಂದಿದ್ದರು. ಆತ ಇಲ್ಲದಿರುವುದನ್ನು ನೋಡಿ, ಬೇರೆ ಗ್ರಾಹಕರತ್ತ ಗಮನ ಹರಿಸಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಕೆಲ ಸಮಯದ ನಂತರ ಮೊಬೈಲ್ ಫೋನ್ ನೋಡಿದಾಗ ಫೋನ್ ಇಲ್ಲದಿರುವುದು ಕಂಡುಬಂದಿದೆ. ಕೂಡಲೇ ಸಿಸಿಟಿವಿ ನೋಡಿದಾಗ ಕೆಲ ನಿಮಿಷದ ಹಿಂದೆ ಬಂದ ಯುವಕ ಕಳ್ಳತನ ಮಾಡಿಕೊಂಡು ಹೋಗಿದ್ದು ಗೊತ್ತಾಗಿದೆ. ಕೂಡಲೇ ಉಪನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.