ಬಳ್ಳಾರಿ: ನಿಧಿ ಆಸೆಗಾಗಿ ಪುರಾತನ ಕಾಲದ ಬಸವನ ಮೂರ್ತಿಯ ತಲೆ ಕತ್ತರಿಸಿದ ಘಟನೆಯೊಂದು ನಡೆದಿದೆ.
ಬಳ್ಳಾರಿ ತಾಲೂಕಿನ ಕುರಗೋಡ ಪಟ್ಟಣದ ಹೊರವಲಯದಲ್ಲಿ ವಜ್ರಬಂಡೆ ಬಸವನ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿ ಪರಾರಿಯಾಗಿದ್ದಾರೆ. ಈ ವಜ್ರಬಂಡೆ ಬಸವ ಮೂರ್ತಿಯ ಒಳಗಡೆ ವಜ್ರದ ನಿಕ್ಷೇಪಗಳಿವೆ ಅಂತ ದುಷ್ಕರ್ಮಿಗಳು ಈ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಎರಡು ಭಾರಿ ಇದೇ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆದಿತ್ತು. ಆದ್ರೆ ರವಿವಾರ ರಾತ್ರಿ ದುಷ್ಕರ್ಮಿಗಳು ಬಸವ ಮೂರ್ತಿಯ ತಲೆ ಕತ್ತರಿಸಿದ್ದಾರೆ. ಹೀಗಾಗಿ ಪುರಾತನ ಕಾಲದ ಅತ್ಯಂತ ಹಳೆಯದಾದ ಬಸವ ಮೂರ್ತಿ ಇದೀಗ ಧ್ವಂಸಗೊಂಡಿದೆ.
ಘಟನೆಯ ನಂತರ ದೇವಸ್ಥಾನದ ಅರ್ಚಕರು ಕುರಗೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.