ಬೆಂಗಳೂರು: ಈಶ್ವರಪ್ಪ ಮಾತು ಕೇಳಿದ್ರೆ ದೊಡ್ಡ ಅನಾಹುತಗಳಿಗೆ ಹೋಗುತ್ತವೆ ಅಂತ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.
ಸಂಸದ ಡಿ.ಕೆ ಸುರೇಶ್ ರನ್ನ (DK Suresh) ಗುಂಡಿಟ್ಟು ಕೊಲ್ಲಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅನೇಕ ಸಾರಿ ಏನೇನೋ ಮಾತಾಡಿದ್ದಾರೆ. ಅವೆಲ್ಲವನ್ನ ತೆಗೆದುಬಿಟ್ಟರೆ ಬಹಳ ಅನಾಹುತಕ್ಕೆ ಹೋಗುತ್ತವೆ. ಡಿ.ಕೆ ಸುರೇಶ್ ಅವರು ಯಾವ ಅರ್ಥದಲ್ಲಿ ಮಾತಾಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ದಕ್ಷಿಣ ರಾಜ್ಯಗಳಿಗೆ ಅನುದಾನದಲ್ಲಿ ಅನ್ಯಾಯವಾಗ್ತಿದೆ ಅಂತ ಹೇಳಿದ್ದಾರೆ. ನಮಗೆ ಅನ್ಯಾಯ ಮಾಡಿ ಉತ್ತರ ಭಾರತಕ್ಕೆ ಕೊಡ್ತಿದ್ದೀರಾ ಅಂತ ನೋವಿನ ಮಾತು ಹೇಳಿರೋದು. ಅವರಿಗೆ ಇರೋ ಸಿಟ್ಟನ್ನ ಅವರು ಮಾತುಗಳ ಮೂಲಕ ತೋರಿಸಿದ್ದಾರೆ ಅಷ್ಟೆ. ಅದಕ್ಕೆ ನಿಜವಾಗಿ ದೇಶ ವಿಭಜನೆ ಮಾಡೋ ಅರ್ಥದಲ್ಲಿ ಹೇಳಿದ್ದಾರೆ ಅಂದರೆ ಹೇಗೆ ಅಂತ ಪ್ರಶ್ನೆ ಮಾಡಿದರು.
ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗ್ತಿದೆ. ಅದಕ್ಕೆ ಆ ರೀತಿ ಹೇಳಿಕೆ ನೀಡಿದ್ದಾರೆ. ಈ ರೀತಿ ಅನ್ಯಾಯ ಆದರೆ ಮುಂದೆ ಹೀಗೆ ಆಗುತ್ತೆ ಅಂತ ಹೇಳಿರೋದು. ಈ ಸಿಟ್ಟನ್ನ ಮಾತಿನ ಮೂಲಕ ಹೇಳಿದ್ದಾರೆ ಅಷ್ಟೆ. ಅದನ್ನ ದೇಶ ವಿಭಜನೆ ಮಾತು ಅಂದರೆ ಹೇಗೆ? ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದು ಕಾಂಗ್ರೆಸ್. ಬಿಜೆಪಿ ಅವರು, ಈಶ್ವರಪ್ಪ ಅವರು ಸ್ವಾತಂತ್ರ್ಯ ತಂದು ಕೊಟ್ಟಿಲ್ಲ. ಇವರು ದೇಶ, ರಾಷ್ಟ್ರೀಯತೆ ಬಗ್ಗೆ ಮಾತಾಡ್ತಾರೆ. ಸಂವಿಧಾನ ಬದಲಾವಣೆ ಮಾಡೋಕೆ ಬಂದಿರೋದು ಅಂತ ಅನಂತ್ ಕುಮಾರ್ ಹೆಗ್ಡೆ ಹೇಳಿದರು. ಇವರ ಉದ್ದೇಶ ಏನು ಅಂತ ಜಗತ್ತಿಗೆ ಗೊತ್ತಿದೆ ಅಂತ ಕಿಡಿಕಾರಿದರು.
ಡಿ.ಕೆ ಸುರೇಶ್ ಹೇಳಿಕೆ ನೋವಿನ ಮಾತು. ಅದಕ್ಕೆ ಸಂಸತ್ ನಲ್ಲಿ ಮೋದಿ (Narendra Modi) ಮಾತಾಡೋದು ಸರಿನಾ? ಅವರಿಗೆ ಇಂತಹ ವಿಷಯ ಸಿಕ್ರೆ ಸಾಕು. ಅನ್ಯಾಯ ಹೇಗೆ ಸರಿ ಮಾಡ್ತೀನಿ ಅಂತ ಮೋದಿ ಅವರು ಹೇಳಬೇಕಿತ್ತು. ಅದು ಬಿಟ್ಟು ಅದನ್ನ ಹಿಡಿದುಕೊಂಡು ಟೀಕೆ ಮಾಡೋದು ಸರಿಯಲ್ಲ ಅಂತ ಈಶ್ವರಪ್ಪ ಮತ್ತು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.