ಉಡುಪಿ: ನಡೆದಾಡುವ ದೇವರಿಗೆ ನೆಪ ಮಾತ್ರಕ್ಕೆ ಭಾರತ ರತ್ನ ಸಿಗಬೇಕು ಅಷ್ಟೆ ಯಾಕೆಂದರೆ ಶ್ರೀಗಳು ಭಾರತ ರತ್ನ ಪ್ರಶಸ್ತಿಗಿಂತಲೂ ಮೀರಿ ಬೆಳೆದವರು. ಹಾಗೆಯೇ ಪ್ರಣಬ್ ಮುಖರ್ಜಿಗೆ ಭಾರತ ರತ್ನ ನೀಡಿ ಅವರನ್ನು ಬಿಜೆಪಿ ಹೈಜಾಕ್ ಮಾಡಕ್ಕಾಗಲ್ಲ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಬಿಜೆಪಿ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ವರ್ಷವಾದರೂ ಶ್ರೀಗಳಿಗೆ ಪ್ರಶಸ್ತಿ ಬರಲಿ ಅಂತ ಆಶಿಸುತ್ತೇನೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬರಬೇಕು ಅನ್ನೋದು ನಮ್ಮ ಆಶಯವಾಗಿತ್ತು, ಬಂದಿದ್ದರೆ ತುಂಬಾ ಸಂತೋಷ ಆಗ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿದ್ದರಲ್ಲಿ ಯಾವುದೇ ರಾಜಕೀಯ ಇಲ್ಲ. ಪ್ರಶಸ್ತಿ ಕೊಟ್ಟು ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕಾಗಲ್ಲ. ಕಾಂಗ್ರೆಸ್ ನಾಯಕರನ್ನು ಯಾವ ಬಿಜೆಪಿಯವರಿಗೂ ಏನೂ ಮಾಡಕಾಗಲ್ಲ. ಪ್ರಣಬ್ ಮುಖರ್ಜಿ ಭಾರತ ರತ್ನಕ್ಕೆ ಅರ್ಹರು, ಅವರಿಗೆ ಪ್ರಶಸ್ತಿ ನೀಡಿರುವುದರಿಂದ ಖುಷಿಯಾಗಿದೆ ಎಂದು ಹೇಳಿದರು.
ಕರ್ನಾಟಕದ ಸಾಲುಮರದ ತಿಮ್ಮಕ್ಕ, ನೃತ್ಯ ನಿರ್ದೇಶಕ ಪ್ರಭುದೇವಗೆ ಪದ್ಮ ಪ್ರಶಸ್ತಿ ಬಂದಿದೆ. ಕಲಾವಿದರಿಗೆ ಭಾಷೆಯ ಗಡಿಯಿಲ್ಲ, ಚಿತ್ರರಂಗ ಬೆಳೆಸಿದವರು ಪ್ರಭುದೇವ ಕುಟುಂಬದವರು ಹೀಗಾಗಿ ಅವರಿಗೆ ಪ್ರಶಸ್ತಿ ಬಂದದ್ದು ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಶಾಸಕರ ಹೊಡೆದಾಟದ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕ ಗಣೇಶ್ ಸಿಕ್ಕೇ ಸಿಗ್ತಾರೆ. ಅಧಿಕಾರಿಗಳು ಅವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಗಲಾಟೆ ನಡೆದ ವೇಳೆ ನಾನು ರೆಸಾರ್ಟಿನಲ್ಲಿ ಇರ್ಲಿಲ್ಲ. ಈ ಬಗ್ಗೆ ನನ್ನನ್ನು ಏನೂ ಹೆಚ್ಚು ಕೇಳ್ಬೇಡಿ. ಮಾಧ್ಯಮದವರಿಗೆ ಯಾಕೆ ಆತುರ? ಸಿಕ್ತಾರೆ ಬಿಡಿ ಎಂದು ಹೇಳಿ ಜಯಮಾಲಾ ನುಣುಚಿಕೊಂಡರು.
ರಾಜಕಾರಣಿಗಳ ಕಾಟಾಚಾರದ ಬರಪ್ರವಾಸ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಬರ ಪ್ರವಾಸ ವಿಚಾರ ನನಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ. ಕೃಷ್ಣೆಬೈರೇಗೌಡರ ಬರ ಪ್ರವಾಸ ಸರಿಯಾಗಿಯೆ ಮಾಡಿದ್ದಾರೆ. ಬರ ಪ್ರವಾಸಕ್ಕೆ ಹೋದಾಗ ಅರಣ್ಯ ನೋಡ್ಕೋಂಡು ಬಂದಿರ್ತಾರೆ. ಬರ ಪರಿಹಾರ ಕೆಲಸ ಮಾಡೋಕೆ ವಿಪಕ್ಷ ಏನೂ ಹೇಳ್ಬೇಕಾಗಿಲ್ಲ. ಎಲ್ಲಾ ನಮ್ಮ ಸರ್ಕಾರವೇ ಮಾಡುತ್ತೆ, ನಮಗೆ ಜವಾಬ್ದಾರಿ ಇದೆ ಎಂದು ಕಿಡಿಕಾರಿದರು.
ಅಷ್ಟೇ ಅಲ್ಲದೆ ಬರ ಪ್ರವಾಸ ಮಾಡದೆ ಮಗನ ಸಿನಿಮಾವನ್ನು ನಾಲ್ಕಾರು ಬಾರಿ ನೋಡಿದ ಸಿಎಂ ನಡೆಯನ್ನೂ ಜಯಮಾಲಾ ಸಮರ್ಥಿಸಿದರು. ನಿಖಿಲ್ ಕುಮಾರಸ್ವಾಮಿ ಕಷ್ಟಪಟ್ಟು ಸಿನೆಮಾ ಮಾಡಿದ್ದಾರೆ. ಸಿನಿಮಾ ನೋಡೋಕೂ ಲೆಕ್ಕಾಚಾರ ಹಾಕ್ಬೇಡಿ. ಅಪ್ಪನಿಗೆ ಮಕ್ಕಳ ಬೆಳವಣಿಗೆ ಬೇಡ್ವ? ಬರ ಅಂತ ಹೇಳಿ ಊಟ ಮಾಡದೆ ಇರೋದಕ್ಕಾಗುತ್ತಾ ಅಂತ ಪ್ರಶ್ನೆ ಮಾಡಿ ಸಿಎಂ ಕುಮಾರಸ್ವಾಮಿಯವರ ಪರವಹಿಸಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv