ನವದೆಹಲಿ: ಬಿಜೆಪಿಗೆ ವಲಸಿಗರು ಸೊಸೆ ಇದ್ದಂತೆ, ಸೊಸೆ ಮನೆಯಲ್ಲಿ ಎಲ್ಲರ ವಿಶ್ವಾಸ ಗಳಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾರ್ಮಿಕವಾಗಿ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ವಲಸಿಗರು ಸೊಸೆ ಇದ್ದಂತೆ, ಸೊಸೆ ಮನೆಯಲ್ಲಿ ಎಲ್ಲರ ವಿಶ್ವಾಸ ಗಳಿಸಬೇಕು. ಗಂಡ, ಅತ್ತೆ ಸೇರಿದಂತೆ ಎಲ್ಲರ ವಿಶ್ವಾಸ ಅವಶ್ಯಕ. ಹೀಗಾಗಿ ವಲಸಿಗರು ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡಿದರೇ ಅವರಿಗೆ ನಮ್ಮ ಮೇಲೆ ವಿಶ್ವಾಸ ಬರಲಿದೆ ಎಂದರು.
ಜನತಾ ಪರಿವಾರದಿಂದ ಕಾಂಗ್ರೆಸ್ ಗೆ ಹೋಗೋದು ಒಂದೇ, ಕಾಂಗ್ರೆಸ್ ನಿಂದ ಬಿಜೆಪಿಗೆ ಬರೋದು ಒಂದೆ. ಜೆಡಿಎಸ್ ಜೊತೆಗೆ ಕಾಂಗ್ರೆಸ್ ಹೋಗಿದ್ದು ಇಷ್ಟ ಇರಲಿಲ್ಲ. ಹೀಗಾಗಿ ನಾನು ರಾಜೀನಾಮೆ ನೀಡಿದೆ ಎಂದು ರಾಜೀನಾಮೆ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ನವೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ಸಾಧ್ಯತೆ: ಸುಧಾಕರ್
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತೆ ಎಂದು ಹೇಳಿಲ್ಲ. ಚುನಾವಣೆ ಸಮಯದಲ್ಲಿ ನಡೆಯುವ ಸಹಜ ಪಕ್ಷಾಂತರದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಶಾಸಕರು ಹೋಗಬಹುದೆಂಬ ಭಯ ಬಿಜೆಪಿಗೆ ಇಲ್ಲ. ಬಿಜೆಪಿಯ ಶಾಸಕರಾರೂ ಬೇರೆ ಪಕ್ಷಗಳಿಗೆ ಹೋಗುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕರಿಗೆ ಅವರ ಮೇಲೆ ವಿಶ್ವಾಸವಿದೆ ಎಂದು ಡಾ.ಸುಧಾಕರ್ ಹೇಳಿದರು.
ಯಡಿಯೂರಪ್ಪ ಅವರ ಜಾಗವನ್ನು ಬಸವರಾಜ್ ಬೊಮ್ಮಾಯಿ ಅವರು ಭರ್ತಿ ಮಾಡುವ ಬಗ್ಗೆ ಕುತೂಹಲ ಇತ್ತು. ಬೊಮ್ಮಾಯಿಯವರು ಈ ಜಾಗ ತುಂಬಬಹುದೇ ಅನ್ನೊ ಪ್ರಶ್ನೆ ಇತ್ತು. ಆದರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಆ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ಸರ್ಕಾರದಲ್ಲಿ ಬೊಮ್ಮಾಯಿ ಅವರು ಉತ್ತಮ ವಾತಾವರಣ ಸೃಷ್ಟಿಸಿದ್ದಾರೆ. ಹೊಸ ಯಶಸ್ವಿ ಸಾರಥಿ ಸಿಕ್ಕಿದ್ದಾರೆ, ಎಲ್ಲರನ್ನೂ ದಡ ಮುಟ್ಟಿಸುವ ಹುರುಪು ಶಾಸಕರಿಗೆ ಬಂದಿದೆ. ಹೀಗಾಗಿ ಮುಂದಿನ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ ಎಂದು ತಿಳಿಸಿದರು.