ಬೆಂಗಳೂರು: ಮಧ್ಯಮ ವರ್ಗದ ಜನರೇ ಎಚ್ಚರ. ಏಕೆಂದರೆ ತಂಡವೊಂದು ನಿಮ್ಮನ್ನು ಚೆನ್ನಾಗಿ ಪರಿಚಯ ಮಾಡಿಕೊಂಡು ಸುಲಿಗೆಗೆ ಇಳಿದು ನಿಮ್ಮನ್ನು ಹಿಂಸಿಸುತ್ತದೆ.
ಹೌದು. ಪೊಲೀಸರ ಸೋಗಿನಲ್ಲಿ ಮಹಿಳೆಯೊಬ್ಬರ ಮಗಳಿಗೆ ಕರೆ ಮಾಡಿ ಐದು ಲಕ್ಷಕ್ಕೆ ಬೇಡಿಕೆ ಇಟ್ಟಾಗ ಈ ಖತರ್ನಾಕ್ ತಂಡದ ಅಸಲಿಯತ್ತು ನೆಲಮಂಗಲ ಪೊಲೀಸರಿಗೆ ಗೊತ್ತಾಗಿದೆ. ನೆಲಮಂಗಲ ಪಟ್ಟಣ ಠಾಣೆಯ ಪಿಎಸ್ಐ ಮಂಜುನಾಥ್ ತೆರಳಿ ಕಾರ್ಯಾಚರಣೆ ನಡೆಸಿ ಇದೀಗ ತಂಡವನ್ನು ಬಂಧಿಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಭಕ್ತನಪಾಳ್ಯದಲ್ಲಿ ಮಹಿಳೆಯನ್ನು ಅಪಹರಿಸಿ 18 ದಿನ ಗೃಹ ಬಂಧನದಲ್ಲಿಟ್ಟಿದ್ದರು. ಬಳಿಕ ಪೊಲೀಸರ ಸೋಗಿನಲ್ಲಿ ಮಹಿಳೆಯ ಮಗಳಿಗೆ ಕರೆ ಮಾಡಿ ಐದು ಲಕ್ಷ ಬೇಡಿಕೆ ಇಟ್ಟಾಗ ಈ ತಂಡ ಪೊಲೀಸರ ಬಲೆಗೆ ಬಿದ್ದಿದೆ.
ನಿಮ್ಮ ತಾಯಿ ಮೋಸದ ಕೇಸ್ನಲ್ಲಿ ಸಿಲುಕಿದ್ದಾರೆ ಅವರನ್ನು ಬಿಡಬೇಕಾದ್ರೆ ಹಣ ಕೊಡಬೇಕು ಎಂದು ತಂಡ ಬೆದರಿಕೆ ಹಾಕಿದೆ. ಅಲ್ಲದೆ 18 ದಿನ ಆ ಮಹಿಳೆಯನ್ನು ಕೋಣೆಯಲ್ಲಿ ಕೈ-ಕಾಲು ಕಟ್ಟಿ ಬಾಯಿಯನ್ನು ಮುಚ್ಚಿದ್ದಾರೆ. ಈ ಐನಾತಿ ತಂಡ ಸಣ್ಣ ಪುಟ್ಟ ಮಧ್ಯಮ ವರ್ಗದವರನ್ನೇ ಪರಿಚಯ ಮಾಡಿಕೊಂಡು ಕಷ್ಟವನ್ನು ಹೇಳಿಕೊಳ್ಳುತ್ತಲೇ ಕೃತ್ಯ ನಡೆಸುತ್ತದೆ.
ಈ ತಂಡದ ಕಿಂಗ್ ಪಿನ್ಗಳಾದ ಉಮೇಶ್, ರತ್ನಮ್ಮ, ಕವಿತಾ, ಭರತ್ ಎಂಬವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧತರಿಂದ ಕೃತ್ಯಕ್ಕೆ ಬಳಸಿದ ಕಾರನ್ನು ನೆಲಮಂಗಲ ಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.