ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾರಾಜ್ ಪ್ರೀತಿಯ ಪುತ್ರನ ನಾಮಕರಣ ಇಂದು ಅದ್ದೂರಿಯಾಗಿ ನಗರದ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್, ಮಗು ಹುಟ್ಟಿದಾಗಲಿಂದಲೂ ನಾಮಕರಣ ಯಾವಾಗ ಮಾಡುತ್ತೀರಾ ಎಂದು ಎಲ್ಲರನ್ನು ಕೇಳುತ್ತಿದ್ದೆ. ಇದೀಗ 11 ತಿಂಗಳ ನಂತರ ಕುಟುಂಬದವರೆಲ್ಲ ಸೇರಿ ಒಂದು ಹೆಸರನ್ನು ತೀರ್ಮಾನಿಸಿದ್ದೇವೆ. ನನ್ನ ಮನಸ್ಸಿನಲ್ಲಿ ಮೊದಲಿನಿಂದಲೂ ರಾಯನ್ ಎಂಬ ಹೆಸರಿತ್ತು. ಚಿರು ಯಾವತ್ತು ನಮ್ಮೆಲ್ಲರಿಗೂ ರಾಯನ್. ಅವನಿಗೆ ಹುಟ್ಟಿರುವ ಯುವರಾಜನೇ ರಾಯನ್ ಎಂದು ಸಂಭ್ರಮ ವ್ಯಕ್ತಪಡಿಸಿದರು. ಇದನ್ನೂ ಓದಿ:ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್
ನಮ್ಮ ಜೀವನದಲ್ಲಿ ನಡೆದ ಎಲ್ಲ ಘಟನೆಯನ್ನು ನೀವು ಮನೆಯ ಸದಸ್ಯರಾಗಿ ನೋಡಿ ಕೊಂಡು ನಿಮ್ಮ ಭಾವನೆಗಳಂತೆ ಅದನ್ನು ಗೌರವಿಸಿದ್ದೀರಾ. ನಮ್ಮ ಜೀವನದಲ್ಲಿ ಕತ್ತಲೆ ತುಂಬಿದ್ದ ಸಮಯದಲ್ಲಿ ಬೆಳಕು ನೀಡಿದ್ದು ನಮ್ಮ ರಾಯನ್. ಅದಕ್ಕೆ ರಾಯನ್ ಎಂದು ಹೆಸರಿಟ್ಟಿದ್ದೇವೆ ಎಂದರು.
ರಾಯನ್ ಎಂಬ ಹೆಸರಿನ ಅರ್ಥ ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜ. ಅದು ನಮ್ಮ ರಾಯನ್. ಹಾಗಾಗಿ ಅವನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದೇವೆ. ಈ ಹೆಸರನ್ನು ಎಲ್ಲರೂ ಇಷ್ಟಪಟ್ಟಿದ್ದು, ನೀವು ಕೂಡ ಇಷ್ಟಪಡುತ್ತೀರಾ ಎಂದು ಭಾವಿಸುತ್ತೇನೆ. ರಾಯನ್ ಹಾಗೂ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದಿದ್ದಾರೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’
ಈ ಸಂದರ್ಭದಲ್ಲಿ ಸುಂದರ್ ರಾಜ್ರವರು, ಚಿರು ಮೊದಲಿನಿಂದಲೂ ಸ್ನೇಹ ಜೀವಿ. ಚಿರು ಅಗಲಿದ ನಂತರ ಸದಾ ನಮ್ಮ ಜೊತೆಯಾಗಿ ನಿಂತಿದ್ದು, ಚಿರು ಸ್ನೇಹಿತ ಪನ್ನಾಗಭರಣ ಹಾಗೂ ಅವರ ತಂಡ. ಎಷ್ಟೋ ಕಷ್ಟದ ಸಮಯದಲ್ಲಿ ಹೇಗೆ ಅದನ್ನು ನಿಭಾಯಿಸಬೇಕು ಎಂದು ಗೊತ್ತಿಲ್ಲದೇ ಇರುವ ಸಂದರ್ಭದಲ್ಲಿ ಅವರು ಬಂದು ನಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತರು. ಚಿರು ಒಬ್ಬ ಒಳ್ಳೆಯ ಸ್ನೇಹಿತರನ್ನು ನೀಡಿ ಹೋಗಿದ್ದಾರೆ ಎಂದು ಭಾವುಕರಾಗಿದ್ದಾರೆ.