ತುಮಕೂರು: ಕೈಗಾರಿಕಾ ಪ್ರದೇಶಗಳಿಂದ ಸ್ಥಳೀಯರಿಗೆ ಉಂಟಾಗುವ ತೊಂದರೆ ಕುರಿತು ವರದಿ ಮಾಡಲು ಹೋಗಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದೆ.
ತುಮಕೂರು ಸತ್ಯಮಂಗಲದ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೇಳೂರು ಬಾಯರ್ ಮೆಡಿಸಿನ್ ಕಂಪನಿಯ ಸಿಬ್ಬಂದಿ ಮಾಧ್ಯಮದವರ ಮೇಲೆ ದರ್ಪ ತೋರಿದ್ದಾರೆ. ಪರಿಣಾಮ ಪಬ್ಲಿಕ್ ಟಿವಿ ವರದಿಗಾರ ಸೇರಿದಂತೆ ಇತರ ಮೂರು ಖಾಸಗಿ ವಾಹಿನಿಯ ವರದಿಗಾರರು ಹಾಗೂ ಕ್ಯಾಮೆರಾಮೆನ್ಗಳು ಗಾಯಗೊಂಡಿದ್ದಾರೆ.
ಕ್ಯಾಮೆರಾಮೆನ್ಗಳಾದ ಚಂದನ್ ಮತ್ತು ದೇವರಾಜ್ಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಕ್ಯಾಮರಾ ಮತ್ತು ಟ್ರೈಪಾಡ್ ಸೇರಿದಂತೆ ಇತರ ಪರಿಕರಗಳನ್ನು ಜಖಂಗೊಳಿಸಿದ್ದಾರೆ. ಬೇಳೂರು ಬಾಯರ್ ಮಾಲೀಕರ ಸೂಚನೆಗೆ ಮೇರೆಗೆ ವೆಂಕಟರಮಣ ಅವರ ಕುಮ್ಮಕ್ಕಿನಿಂದ ಪ್ರಚೋದನೆಗೊಂಡ ಸಿಬ್ಬಂದಿ ಏಕಾಏಕಿ ದಾಳಿ ನಡೆಸಿ, ರೂಮಿನಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೇಳೂರು ಬಾಯರ್ ನ ಎಚ್.ಆರ್ ಮ್ಯಾನೇಜರ್ ವೆಂಕಟರಮಣ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜೂನ್ 08ರಂದು ಬೇಳೂರು ಬಾಯರ್ ಮೆಡಿಸಿನ್ ಕಂಪನಿಯ ರಿಯಾಕ್ಟರ್ ಸ್ಫೋಟಗೊಂಡು ಸ್ಥಳೀಯರ ಮನೆಗಳಿಗೆ ಹಾನಿಯುಂಟಾಗಿ ಹಲವರಿಗೆ ಗಾಯವಾಗಿತ್ತು.
ಈ ಹಿನ್ನೆಲೆಯಲ್ಲಿ ಇಲ್ಲಿಯ ಕೈಗಾರಿಕಾ ಪ್ರದೇಶದಿಂದ ಸ್ಥಳೀಯರಿಗೆ ಉಂಟಾಗುತಿದ್ದ ತೊಂದರೆ ಕುರಿತು ಮಾಧ್ಯಮದವರು ವರದಿ ಮಾಡಲು ತೆರಳಿದ್ದರು. ಯಾರು ಕೂಡ ಫ್ಯಾಕ್ಟರಿಗಳ ಒಳಪ್ರವೇಶ ಮಾಡದೇ ಸಾರ್ವಜನಿಕ ರಸ್ತೆಯಲ್ಲೇ ನಿಂತು ಕಾರ್ಖಾನೆಯ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ.