– ಸೇನಾಧಿಕಾರಿಗಳಲ್ಲಿ ಚಿಕ್ಕತಾಯಮ್ಮ ಮನವಿ
ಮಂಡ್ಯ: ಅಪಾರ ಜನಸಾಗರದ ಕಣ್ಣೀರ ವಿದಾಯದೊಂದಿಗೆ ಹುತಾತ್ಮ ಯೋಧ ಗುರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಗುರು ಇಲ್ಲದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದ್ದು, ಗುರು ಅವರ ಚಿಕ್ಕಂದಿನ ಫೋಟೋ ಹಿಡಿದು ತಾಯಿ ಗೋಳಾಡುತ್ತಿದ್ದಾರೆ.
ಯೋಧ ಗುರು ತಾಯಿ ಚಿಕ್ಕತಾಯಮ್ಮ, ಗುರು ಅವರು ಬಾಲ್ಯದಲ್ಲಿ ಪೊಲೀಸ್ ಡ್ರೆಸ್ನಲ್ಲಿ ತೆಗೆಸಿಕೊಂಡಿದ್ದ ಫೋಟೋ ನೋಡುತ್ತಾ ಕಣ್ಣಿರು ಹಾಕುತ್ತಿದ್ದು, ಈ ಫೋಟೋದಲ್ಲಿ ಏನ್ ಚಂದಾ ಕಾಣ್ತಾ ಇದ್ದೀಯಾ. ಯಾವುದಾದರೂ ತಾಯಿಯ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬಾ ಮಗನೇ ಎಂದು ತಾಯಿ ಗೋಳಾಡಿದ್ದಾರೆ. ಈ ದೃಶ್ಯಗಳು ನೋಡುಗರ ಕರುಳು ಕಿತ್ತುಬರುವಂತಿದೆ.
ಗುರು ರಾಜ್ಯದ ಮಗ:
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರು ತಾಯಿ, ಜನರು ಕೊಟ್ಟಿರುವ ಪ್ರೀತಿ ಏಳು ಜನ್ಮವಾದರೂ ಮುಗಿಯುವುದಿಲ್ಲ. ಅಷ್ಟೊಂದು ಪ್ರೀತಿಯನ್ನು ನನ್ನ ಮಗ ಎಲ್ಲರಿಗೂ ಕೊಟ್ಟು ಹೋಗಿದ್ದಾನೆ. ಗುರು ನನ್ನ ಮಗನಲ್ಲ, ರಾಜ್ಯದ ಮಗ ಅವನು. ಚಿತೆಯ ಮೇಲೆ ಮಗನನ್ನು ಮಲಗಿಸಿದಾಗ ಮಾತ್ರ ಮುಖ ತೋರಿಸಿದ್ದರು. ಮಗನ ಮುಖವನ್ನು ಒಮ್ಮೆ ಕೈಯಲ್ಲಿ ಸವರಿ ನೋಡಿದೆ. ನನ್ನ ಮಗನ ಕೊಂದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸೇನಾಧಿಕಾರಿಗಳಲ್ಲಿ ಮನವಿ:
ಇದೇ ವೇಳೆ ಗುರು ಮನೆಯ ಬಳಿ ಸೇನಾಧಿಕಾರಿಗಳು ಬಂದು ನಾವಿನ್ನು ಹೊರಡುತ್ತೇವೆ ಎಂದು ಹೇಳಿದಾಗ ಚಿಕ್ಕತಾಯಮ್ಮ, ನನ್ನ ಮಗ ನಿಮ್ಮ ಜೊತೆ ಇದ್ದಾನಾ..? ಏನು ಮಾಡುತ್ತಿದ್ದಾನೆ ಎಂದು ಕೇಳುತ್ತಾ ಮತ್ತೆ ಕಣ್ಣೀರು ಹಾಕಿದ್ದಾರೆ. ನೀವು ಚೆನ್ನಾಗಿರಿ, ನನ್ನ ಮಗನಿಗೆ ಹೀಗೆ ಮಾಡಿದವರನ್ನು ಯಾವತ್ತೂ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
https://www.youtube.com/watch?v=KifeAcf26G4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv