-ಗೇಮ್ ಆಡಲು ಬಂದವನನ್ನ ಕಳ್ಳ ಎಂದ ಸಿಬ್ಬಂದಿ!
ಬೆಂಗಳೂರು: ಗೇಮ್ ಆಡಲು ಹೋದ ಬಾಲಕನ ಮೇಲೆ ಮಂತ್ರಿ ಮಾಲ್ ಸಿಬ್ಬಂದಿ ಕಳ್ಳ ಎಂದು ಆರೋಪಿಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.
ವಿಜಯ್ ಕುಮಾರ್(15) ಹಲ್ಲೆಗೊಳಗಾದ ಬಾಲಕ. ಡಿಸೆಂಬರ್ 21ರ ಸಂಜೆ ವಿಜಯ್ ಕುಮಾರ್ ಮಂತ್ರಿ ಮಾಲ್ಗೆ ಗೇಮ್ ಆಡಲು ಹೋಗಿದ್ದು, ಮಾಲ್ನ 2ನೇ ಮಹಡಿಯಲ್ಲಿ ತನ್ನ ಮೊಬೈಲ್ ಚಾರ್ಜ್ಗೆ ಹಾಕಿ ಮೊಬೈಲ್ ಬಳಸುತ್ತಿದ್ದ. ಅದೇ ವೇಳೆ ಅದೇ ಚಾರ್ಜಿಂಗ್ ಪಾಯಿಂಟ್ನಲ್ಲಿ ಬೇರೆಯವರು ತಮ್ಮ ಮೊಬೈಲ್ ಫೋನ್ಗಳನ್ನು ಚಾರ್ಜ್ ಗೆ ಹಾಕಿದ್ದರು. ಆಗ ಅಲ್ಲಿಗೆ ಬಂದಿದ್ದ ಮಂತ್ರಿ ಮಾಲ್ನ ನಾಲ್ವರು ಸಿಬ್ಬಂದಿ ಬಾಲಕನ ಬಳಿ ಬಂದು ಮೊಬೈಲ್ ಕಳ್ಳತನ ಮಾಡುತ್ತಿಯಾ ಎಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಬಾಲಕನನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದು ದೊಣ್ಣೆ ಮತ್ತು ವೈರ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಕುರಿತು ಬಾಲಕನ ಪೋಷಕರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv