ಮಂಡ್ಯ: ಮತದಾನ ಮುಗಿದ ಬೆನ್ನಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ವರ್ಸಸ್ ಸುಮಲತ ಅಂಬರೀಶ್ ಪರ, ವಿರೋಧ ಬೆಟ್ಟಿಂಗ್ ದಂಧೆ ಜೋರಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್, ಬೆಟ್ಟಿಂಗ್ ಕಟ್ಟಿಸುವವರು ಮತ್ತು ಬೆಟ್ಟಿಂಗ್ ಆಡಿಸುವವರ ಮೇಲೆ ನಿಗಾವಹಿಸಲಾಗಿದೆ. ವೈಯಕ್ತಿಕ ಮತ್ತು ಗುಂಪು ಬೆಟ್ಟಿಂಗ್ ದಂಧೆ ಮಾಡುವವರನ್ನು ಟ್ರೇಸ್ ಮಾಡಲು ನಮ್ಮ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ನಡೆಸುವ ಬೆಟ್ಟಿಂಗ್ ದಂಧೆಯ ಮೇಲೆ ನಾವು ಕಣ್ಣಿಟ್ಟಿದ್ದೇವೆ. ಇದಕ್ಕಾಗಿಯೇ ತಂಡವನ್ನು ಕೂಡ ರಚನೆ ಮಾಡಲಾಗಿದೆ. ರಾಜಕೀಯ ಬೆಟ್ಟಿಂಗ್ ಆಡುವುದು ಕಾನೂನು ಪ್ರಕಾರ ತಪ್ಪು. ಬೆಟ್ಟಿಂಗ್ ಕಟ್ಟಿಸುವ ಬುಕ್ಕಿಗಳ ಮೇಲೆ ನಾವು ನಿಗಾವಹಿಸಿದ್ದು ಅವರನ್ನು ಟ್ಯಾಕಲ್ ಮಾಡ್ತೇವೆ. ಇದರ ಮೇಲೂ ಯಾರಾದ್ರೂ ಬೆಟ್ಟಿಂಗ್ನಲ್ಲಿ ತೊಡಗಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.