ಮಂಡ್ಯ: ದೇಶದಲ್ಲಿ ಕಾಂಗ್ರೆಸ್ ಪಕ್ಷ ದಯಾನೀಯ ಸ್ಥಿತಿಗೆ ತಲುಪಿದ್ದು, ಅಭ್ಯರ್ಥಿಗಳಿಲ್ಲದೇ ಲೋಕಸಭಾ ಉಪ ಚುನಾವಣೆಯಲ್ಲಿ ಶಿವಮೊಗ್ಗ ಹಾಗೂ ಬಳ್ಳಾರಿ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ನಾವು ಈಗಾಗಲೇ ಈ ಎರಡು ಕ್ಷೇತ್ರಗಳನ್ನು ಗೆದ್ದಿದ್ದೇವೆ, ಇನ್ನು ಉಳಿದಿರೋದು ಮಂಡ್ಯ ಕ್ಷೇತ್ರವೊಂದೇ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಬಿಎಸ್ವೈ, ಮಂಡ್ಯ ಫಲಿತಾಂಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಕಾಯುತ್ತಾ ಇದ್ದಾರೆ. ಬಿಜೆಪಿ ರಾಜ್ಯದಲ್ಲಿ ನಡೆಯಲಿರುವ 5 ಉಪಚುನಾವಣೆಯನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಈಗಾಗಲೇ ನಾವು ಶಿವಮೊಗ್ಗ ಹಾಗೂ ಬಳ್ಳಾರಿ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇನ್ನೂ ಬಾಕಿ ಇರೋದು ಮಂಡ್ಯ ಮಾತ್ರ. ಮತ್ತೆ ಇಲ್ಲಿಗೆ ಅ. 23 ಹಾಗೂ 26 ರಂದು ಭೇಟಿ ನೀಡಿ ಪ್ರಚಾರ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ನಾನು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿದವನು ಎಂಬ ವಿಚಾರವನ್ನು ಪ್ರಸ್ತಾಪಿಸಿದ ಬಿಎಸ್ವೈ, ಶಿವಮೊಗ್ಗದ ಶಿಕಾರಿಪುರದ ಜನ ನನ್ನನ್ನು ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದರು. ಆದರೆ ಮಂಡ್ಯದ ಜನ ನನಗೆ ಇನ್ನೂ ಆಶೀರ್ವಾದ ಮಾಡಿಲ್ಲ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲುವುದು ನೂರರಷ್ಟು ಸತ್ಯ. ಶಿವಮೊಗ್ಗದಲ್ಲಿ ನನ್ನ ಪುತ್ರನೇ ಸ್ಪರ್ಧೆ ಮಾಡಿರುವುದರಿಂದ ನನಗೆ ಅಲ್ಲಿಗಿಂತ ಮಂಡ್ಯ ಕ್ಷೇತ್ರವೇ ಹೆಚ್ಚು ಮುಖ್ಯವಾಗಿದೆ. ಆದ್ದರಿಂದ ನಾನು ಮಂಡ್ಯದಲ್ಲಿ ಪ್ರಚಾರಕ್ಕೆ ಬರುತ್ತೇನೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv