ಬೆಂಗಳೂರು: ನಗರದಲ್ಲಿ ಇಂದು ಮುಂಜಾನೆ ಮಚ್ಚು, ಲಾಂಗುಗಳು ಸದ್ದು ಮಾಡಿದ್ದು, ದುಷ್ಕರ್ಮಿಗಳು ಅಪರಿಚಿತ ವ್ಯಕ್ತಿಯ ಕೈ ಕಡಿದು, ತಲೆ ಮೇಲೆ ಕಲ್ಲೆಸೆದು ಭೀಕರವಾಗಿ ಕೊಲೆ ಮಾಡಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಡ್ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು. 35 ವರ್ಷದ ವ್ಯಕ್ತಿಯ ದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.
ದುಷ್ಕರ್ಮಿಗಳು ಮೊದಲು ಮಣಪ್ಪುರಂ ಗೋಲ್ಡ್ ಲೋನ್ ಸೆಂಟರ್ ಬಳಿ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ. ನಂತರ ಅಲ್ಲಿಂದ ನೂರು ಮೀಟರ್ ಅಟ್ಟಾಡಿಸಿಕೊಂಡು ಹೋಗಿ ಕೃತ್ಯವೆಸಗಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಘಟನಾ ಸ್ಥಳಕ್ಕೆ ಆಗಮಿಸಿ ತುಂಡಾದ ಕೈ ಸಮೇತ ಮೃತ ದೇಹವನ್ನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆ ನಡೆದ ಪ್ರದೇಶವಾದ ಮಣಪ್ಪುರಂ ಗೋಲ್ಡ್ ಲೋನ್ ಸೆಂಡರ್ ಸುತ್ತಮುತ್ತ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಗಳನ್ನು ಅಳವಡಿಸಿಲ್ಲ. ಸಿಸಿಟಿವಿ ದೃಶ್ಯ ಲಭ್ಯವಾದರೆ ಕೊಲೆಯಾದ ವ್ಯಕ್ತಿ ಯಾರು, ದುಷ್ಕರ್ಮಿಗಳು ಯಾರು ಎಂದು ಪತ್ತೆ ಹಚ್ಚುವ ಕಾರ್ಯಕ್ಕೆ ಸಹಕಾರಿಯಾಗುತ್ತಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.