ಯಾದಗಿರಿ: ಮೌನೇಶ್ವರ ನನ್ನನ್ನು ಕರೆದಿದ್ದಾನೆ ಎಂದು ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಗೆ ಹಾರಿದ ಮಾನಸಿಕ ಅಸ್ವಸ್ಥನೊಬ್ಬ ಬದುಕಿ ದಡ ಸೇರಿದ ಘಟನೆ ಯಾದಗಿರಿ ಜಿಲ್ಲೆಯ ತಿಂಥಣಿ ಬ್ರಿಡ್ಜ್ ಬಳಿ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಯುವಕ ಶರಣಪ್ಪ ನದಿಗೆ ಹಾರಿದ ವ್ಯಕ್ತಿ. ಶುಕ್ರವಾರ ಶರಣಪ್ಪ ತಮ್ಮ ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆಂದು ನವಿಗುಡ್ಡಕ್ಕೆ ತೆರಳಿ ವಾಪಸ್ಸು ಆಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಆ ಮೌನೇಶ ನನ್ನನ್ನು ಕರೆಯುತ್ತಿದ್ದಾನೆ ಎಂದು ನೋಡು ನೋಡುತ್ತಿದ್ದಂತೆ 80 ಅಡಿ ಎತ್ತರದಿಂದ ನದಿಗೆ ಹಾರಿದ ಶರಣಪ್ಪ, ಜೀವದ ಹಂಗು ತೊರೆದು 2 ಕಿಮೀ ವರಗೆ ಈಜಿದ್ದಾನೆ. ಕೊನೆಗೆ ವೀರಘಟ್ಟದ ಆದಿ ಮೌನಲಿಂಗೇಶ್ವರ ಸನ್ನಿಧಾನದ ಹತ್ತಿರ ನಿತ್ರಾಣಗೊಂಡಿದ್ದಾನೆ.
ಶರಣಪ್ಪನನ್ನು ಕಂಡ ಸ್ಥಳೀಯರು ಆತನನ್ನು ರಕ್ಷಣೆ ಮಾಡಿ ದಡಕ್ಕೆ ಕರೆ ತಂದಿದ್ದಾರೆ. ಸದ್ಯ ಶರಣಪ್ಪ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಶುಕ್ರವಾರ ಮಧ್ಯಾಹ್ನ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.