ಚಿಕ್ಕಮಗಳೂರು: ತುಂಬಿ ಹರಿಯುತ್ತಿದ್ದ ಭದ್ರಾ ಬಲ ದಂಡೆ ನಾಲೆಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಸಮೀಪ ನಡೆದಿದೆ.
ದಾವಣಗೆರೆ ಮೂಲದ ಪ್ರವಾಸಿ ಬಸವರಾಜ್ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ. ಬಸವರಾಜ್ ತನ್ನ ಐವರು ಸ್ನೇಹಿತರೊಂದಿಗೆ ಎರಡು ದಿನಗಳ ಹಿಂದೆ ಪ್ರವಾಸಕ್ಕೆಂದು ಲಕ್ಕವಳ್ಳಿ ಡ್ಯಾಂಗೆ ಬಂದಿದ್ದರು. ಈ ವೇಳೆ ಸಹ ಸ್ನೇಹಿತರು ಅಲ್ಲೇ ನಾಲೆಯ ಮತ್ತೊಂದು ಬದಿಯಲ್ಲಿ ಅಡುಗೆ ಮಾಡುವ ವೇಳೆ ಬಸವರಾಜ್ ಏಕಾಂಗಿಯಾಗಿ ಈಜುತ್ತಿದ್ದರು. ಅವರ ಸ್ನೇಹಿತರು ಬೇಡ ಬಾ ಎಂದ್ರು ಬಾರದ ಬಸವರಾಜ್ ಈಜುತ್ತಲೇ ಸ್ನೇಹಿತರು ನೋಡುತ್ತಿದ್ದಂತೆಯೇ ಮುಳುಗಿ ಹೋಗಿದ್ದಾರೆ.
ಈ ಸನ್ನಿವೇಶವನ್ನ ಸ್ನೇಹಿತರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮೃತದೇಹ ಸಿಗುವ ಲಕ್ಷಣಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈ ನಾಲೆ ದಾವಣಗೆರೆಗೆ ಹೋಗಿ ವಾಣಿವಿಲಾಸ ಸಾಗರದವರೆಗೂ ಹರಿಯಲಿದೆ.
ದಾವಣಗೆರೆಯಿಂದ ಕೂಡ ನೂರಾರು ಜನ ಬಂದು ಮೃತದೇಹ ಹುಡುಕಾಟ ನಡೆಸುತ್ತಿದ್ದಾರೆ. ನಲ್ಲೂರು ಬಳಿ ನಾಲೆ ಎರಡು ವಿಭಾಗವಾಗಿ ಹರಿಯಲಿದೆ. ಒಂದು ವಾಣಿವಿಲಾಸ ಸಾಗರಕ್ಕೆ ಹೋದರೆ ಮತ್ತೊಂದು ಬೇರೆ ಕಡೆ ಹೋಗುತ್ತೆದೆ. ಸದ್ಯಕ್ಕೆ ಪೊಲೀಸರು ಮಾರ್ಗದುದ್ದಕ್ಕೂ ಹುಡುಕುತ್ತಿದ್ದಾರೆ.
ನಲ್ಲೂರು ಪೊಲೀಸರು, ಸ್ಥಳಿಯರು ಮತ್ತು ಈಜು ತಜ್ಞರು ಮೃತದೇಹ ತೇಲಿಬರಬಹುದೆಂದು ಕಾಯುತ್ತಿದ್ದಾರೆ. ಈ ಘಟನೆ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.