ಮೈಸೂರು: ಮೈಕ್ರೋಫೈನಾನ್ಸ್ (Microfinance) ಕಿರುಕುಳಕ್ಕೆ ಹೆದರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರದಲ್ಲಿ ನಡೆದಿದೆ.
ನಂಜಾಪುರದ ವಸಂತಕುಮಾರ್ ಪುತ್ರ ರಂಜಿತ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೆ ನಿರ್ಮಾಣಕ್ಕಾಗಿ ಮೈಕ್ರೋಫೈನಾನ್ಸ್ನಲ್ಲಿ 12 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಯಲ್ಲಿ ವಿಳಂಬ ಹಿನ್ನೆಲೆ 2 ಬಾರಿ ಫೈನಾನ್ಸ್ ನವರು ಮನೆಗೆ ಬೀಗ ಹಾಕಿದ್ದರು. ಈವರೆಗೆ 8 ಲಕ್ಷ ರೂ. ಪಾವತಿ ಮಾಡಿದ್ದ ರಂಜಿತ್ ಇತ್ತೀಚೆಗೆ 3 ಲಕ್ಷ ರೂ. ಪಾವತಿಸಿದ್ದರೂ ಕಿರುಕುಳ ಮುಂದುವರಿಸಿದ್ದರು ಎಂಬ ಆರೋಪವಿದೆ.

ಮಳೆ ಕೊರತೆಯಿಂದ ಜಮೀನಿನ ಬೆಳೆ ಕೈಕೊಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಂಜಿತ್ ಮತ್ತೆ ಮನೆಗೆ ಬೀಗ ಹಾಕಿದರೆ ಗ್ರಾಮದಲ್ಲಿ ಅವಮಾನವಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಪತ್ನಿಗೆ ಹೇಳಿಕೊಂಡಿದ್ದನಂತೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.
ಪತಿ ಸಾವಿಗೆ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳವೇ ಕಾರಣ ಎಂದು ಪತ್ನಿ ಭಾಗ್ಯ ಆರೋಪಿಸಿದ್ದಾರೆ. ಘಟನೆ ಕುರಿತು ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
