ಕೋಲಾರ: ತಮಿಳುನಾಡು ಮೂಲದ ಅಪರಿಚಿತ ವ್ಯಕ್ತಿಯೊಬ್ಬ ವಿದ್ಯುತ್ ಕಂಬವೇರಿ ನ್ಯಾಯಕ್ಕಾಗಿ ಆಗ್ರಹ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.
ಮುಳಬಾಗಿಲು ತಾಲೂಕಿನ ಕಾಂತರಾಜ ಸರ್ಕಲ್ ಬಳಿ ಇರುವ ವಿದ್ಯುತ್ ಕಂಬ ಏರಿದ ವ್ಯಕ್ತಿ ತನ್ನ ಕುಟುಂಬಕ್ಕೆ ಅನ್ಯಾಯ ಆಗಿದೆ. ಕುಟುಂಬಕ್ಕೆ ಆಗಿರುವ ಅನ್ಯಾಯದಿಂದ ಬೇಸತ್ತು ಕಂಬವೇರಿ ಆತ್ಯಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.
ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಆತನ ಮನ ಒಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಆತ ಮಾಧ್ಯಮದವರನ್ನೂ ಸ್ಥಳಕ್ಕೆ ಬರುವಂತೆ ಆಗ್ರಹ ಮಾಡುತ್ತಿದ್ದ.
ಅರೆ ಹುಚ್ಚನಂತೆ ವರ್ತಿಸುತ್ತಿದ್ದ ಆತನನ್ನು ಸತತ ಒಂದೂವರೆ ಗಂಟೆಗಳ ಪ್ರಯತ್ನ ಪಟ್ಟು ಕೆಳಗಡೆ ಇಳಿಸಲಾಯಿತು. ಮುಳಬಾಗಲು ಗ್ರಾಮಾಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.