ಮೈಸೂರು: ಜಾಹೀರಾತಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪವರ ಭಾವಚಿತ್ರವನ್ನು ಚಿಕ್ಕದ್ದಾಗಿ ಹಾಕಿದ್ದಕ್ಕೆ ಬಸವ ಜಯಂತಿ ಸಭಾ ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಸುತ್ತೂರು ಮಠದ ಆವರಣದಲ್ಲಿ ನಡೆಯುತ್ತಿರುವ ಬಸವ ಜಯಂತಿ ಸಂಬಂಧ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಲಾಗಿತ್ತು.
ಬಸವ ಜಯಂತಿಗೆ ಶುಭಾಶಯ ಕೋರಿ ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಪತ್ರಿಕಾ ಜಾಹೀರಾತು ನೀಡಿದ್ದಾರೆ. ಈ ಜಾಹೀರಾತಿನಲ್ಲಿ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳ ಭಾವಚಿತ್ರ ಹಾಕಿಸಲಾಗಿದೆ. ಜೆಡಿಎಸ್, ಕಾಂಗ್ರೆಸ್ ನಗರಾಧ್ಯಕ್ಷರ ಫೋಟೋ, ಬಿಜೆಪಿ ಸಂಸದರ ಫೋಟೋ ಎಲ್ಲವನ್ನೂ ದೊಡ್ಡದಾಗಿ ಹಾಕಿಸಲಾಗಿದೆ. ಆದರೆ ಜಾಹೀರಾತಿನ ಕೆಳ ಸಾಲಿನ ಗುಂಪಿನಲ್ಲಿ ಚಿಕ್ಕದಾಗಿ ಬಿ.ಎಸ್. ಯಡಿಯೂರಪ್ಪ ಭಾವಚಿತ್ರ ಹಾಕಲಾಗಿದೆ. ಇದರಿಂದ ಯಡಿಯೂರಪ್ಪವರ ಅಭಿಮಾನಿ ಬಸವ ಜಯಂತಿಯ ಸಭಾ ಕಾರ್ಯಕ್ರಮ ನಡೆಯುವ ವೇಳೆ ಆಕ್ರೋಶ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಮುಂದಾದರು.
ಯಡಿಯೂರಪ್ಪವರು ವೀರಶೈವ ಸಮಾಜದ ಕಳಸ ಹಾಗಾಗಿ ಅವರ ಭಾವಚಿತ್ರವನ್ನು ಸಣ್ಣದಾಗಿ ಹಾಕಿ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಭಾವಚಿತ್ರವನ್ನು ದೊಡ್ಡದಾಗಿ ಹಾಕಿದ್ದಾರೆ. ಅವರ ಜೊತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರ ದೊಡ್ಡದಾಗಿ ಹಾಕಿಸಿದ್ದಾರೆ. ಆದರೆ ಬಿಎಸ್ವೈ ಚಿತ್ರ ಸಣ್ಣದಾಗಿ ಹಾಕಿ ಅವಮಾನ ಮಾಡಲಾಗಿದೆ ವೇದಿಕೆ ಮುಂಭಾಗ ಯಡಿಯೂರಪ್ಪ ಅಭಿಮಾನಿ ಕೂಗಾಡಿದರು.