ಉಡುಪಿ: ಮಲಯಾಳಂ ಸೂಪರ್ ಸ್ಟಾರ್, ನಿರ್ದೇಶಕ ಮೋಹನ್ಲಾಲ್ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವಿಯ ಸನ್ನಿಧಿಯಲ್ಲಿ ಕೆಲಕಾಲ ಧ್ಯಾನ ಮಾಡಿದರು. ದೇವಿಗೆ ಮುಂಜಾನೆ ನಡೆಯುವ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.
ದೇವಸ್ಥಾನದ ಪ್ರಾಂಗಣದಲ್ಲಿ ಗಣಪತಿ, ವೀರಭದ್ರ ಗುಡಿಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಮೋಹನ್ ಲಾಲ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು, ವೀಡಿಯೋ ಮಾಡಲು ನೂರಾರು ಜನ ಮುಗಿಬಿದ್ದರು. ಇದನ್ನೂ ಓದಿ: ಸಾಮಾನ್ಯರಂತೆ ಸುಳ್ಯದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ
ಸುಬ್ರಹ್ಮಣ್ಯಕ್ಕೆ ಭೇಟಿ: ಇದೇ ತಿಂಗಳ 15ರಂದು ಇವರು ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು. ನಟ ಮೋಹನ್ ಲಾಲ್ ಗುರುವಾರ ಮುಂಜಾನೆ ದೇವರ ದರ್ಶನ ಪಡೆದು ಬಳಿಕ ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಮಲಯಾಳಂ ಕಾಯಂಕುಳಂ ಕೊಚ್ಚುನ್ನಿ ಚಿತ್ರದ ಚಿತ್ರೀಕರಣ ಪುತ್ತೂರು ತಾಲೂಕಿನ ಕಡಬದ ಬಲ್ಯ ಹಾಗೂ ಪದವು ನಲ್ಲಿ ನಡೆಯುತ್ತಿತ್ತು. ಕೊಚ್ಚುನ್ನಿ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ನಿವಿನ್ ಪೌಲ್, ಪ್ರಿಯಾ ಆನಂದ್ ಸೇರಿದಂತೆ ಇತರ ಸಹ ನಟರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಬಹುಕೋಟಿ ವೆಚ್ಚದ ಮಮ್ಮುಟ್ಟಿ ನಟನೆಯ ಮಾಮಾಂಗಂ ಚಿತ್ರದ ಚಿತ್ರೀಕರಣ ಕೂಡಾ ಕಡಬದ ಕೊಯಿಲ ಫಾರ್ಮ್ನಲ್ಲಿ ನಡೆದಿತ್ತು. ಎರಡೂ ಚಿತ್ರದ ನಟರಿಗೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.