ಲಕ್ನೋ: ಕೆಲ ಪೊಲೀಸ್ ಅಧಿಕಾರಿಗಳು ಮಾನವೀಯತೆಯನ್ನು ಮರೆತು ಬಿಡ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 10ನೇ ತರಗತಿಯ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೋಷಕರು ಮಗಳ ಸಾವಿನ ದುಃಖದಲ್ಲಿದ್ದರು. ಈ ವೇಳೆ ಪೊಲೀಸರು ಪೋಷಕರ ಕೈಯಿಂದಲೇ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಟ್ಟಿಕೊಡಲು ಆದೇಶಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಮೈನಪುರಿ ಜಿಲ್ಲೆಯ ಮೋಹನ್ ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 10ನೇ ತರಗತಿಯ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಅಂಜಲಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಂಜಲಿ ತಂದೆ-ತಾಯಿ ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಅಂಜಲಿ ಸಾವಿನ ಸುದ್ದಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರು ಬರುವ ಮೊದಲೇ ಗ್ರಾಮಸ್ಥರು ಅಂಜಲಿ ಶವವನ್ನು ಕೆಳಗೆ ಇಳಿಸಿದ್ರು. ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಬೇಕಿದೆ. ಹಾಗಾಗಿ ಮೃತದೇಹವನ್ನು ಬೆಡ್ ಶೀಟ್ ನಲ್ಲಿ ಕಟ್ಟಿಕೊಡಿ ಅಂತಾ ಪೋಷಕರಿಗೆ ಆದೇಶಿಸಿದ್ದಾರೆ. ಕೊನೆಗೆ ಪೋಷಕರೇ ಬೆಡ್ಶೀಟ್ನಲ್ಲಿ ಅಂಜಲಿ ಮೃತದೇಹವನ್ನು ಸುತ್ತಿ, ದಾರದಿಂದ ಕಟ್ಟಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಪೊಲೀಸರ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಪೊಲೀಸರು ಆಸ್ಪತ್ರೆಯ ಸಿಬ್ಬಂದಿಯ ಜೊತೆಗೆ ಬಂದು ಮೃತದೇಹವನ್ನು ತೆಗೆದುಕೊಂಡು ಹೋಗುತ್ತಾರೆ. ಆದ್ರೆ ಇಲ್ಲಿಯ ಪೊಲೀಸರು ಪೋಷಕರ ಕೈಯಲ್ಲಿಯೇ ಅಮಾನವೀಯ ಕೆಲಸ ಮಾಡಿಸಿದ್ದಾರೆ.