ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ನಿಲ್ಲುವಂತೆ ಕಾಣುತ್ತಿಲ್ಲ. ಇತ್ತ ಅಸ್ಸಾಂನಲ್ಲಿ ಕುಳಿತಿರುವ ರೆಬೆಲ್ ಶಾಸಕರಿಗೆ ತಾಕತ್ ಇದ್ರೆ ಪಕ್ಷ ತೊರೆದು ಚುನಾವಣೆ ಎದುರಿಸಿ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಸವಾಲು ಹಾಕಿದ್ದಾರೆ.
ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಅಸ್ಸಾಂ ಸೇರಿರುವ ಬಂಡಾಯ ನಾಯಕರಿಗೆ ತಾಕತ್ ಇದ್ದರೆ ಶಿವಸೇನೆಯನ್ನು ತ್ಯಜಿಸಿ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ. ನಿಮ್ಮ ಪ್ರಕಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಸಮರ್ಥ ಆಡಳಿತಗಾರರಾದರೆ ನೀವೆಲ್ಲರೂ ಕೂಡ ಅಸಮರ್ಥ ನಾಯಕರೇ ಹಾಗಾಗಿ ಜನರ ಮುಂದೆ ನಡೆಯೋಣ. ಇದು ಸತ್ಯ ಸುಳ್ಳುಗಳ ಯುದ್ಧವಾಗಿದ್ದು, ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ನಾವು ಗೆಲ್ಲುತ್ತೇವೆ. ಆದರೆ, ನಮಗಾದ ದ್ರೋಹವನ್ನು ಎಂದಿಗೂ ಮರೆಯುವುದಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟು – ಶಿಂಧೆ, ಫಡ್ನವೀಸ್ ಭೇಟಿ ಸರ್ಕಾರ ರಚನೆ ಚರ್ಚೆ
ಇತ್ತ ಬಂಡಾಯದ ಬಾವುಟ ಹಾರಿಸಿ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿರುವ ಅತೃಪ್ತ ಶಾಸಕರ ನಾಯಕ ಏಕನಾಥ್ ಶಿಂಧೆ ಜೊತೆಗಿರುವ 50ಕ್ಕೂ ಹೆಚ್ಚು ನಾಯಕರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಕಸರತ್ತಿನಲ್ಲಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಪಕ್ಷಿ ಬಡಿದು ಎಮರ್ಜೆನ್ಸಿ ಲ್ಯಾಂಡಿಂಗ್
ಈ ನಡುವೆ ಶಿವಸೇನಾ ಹೆಸರಿಗಾಗಿ ಮೂಲ ಶಿವಸೇನೆ ನಾಯಕರು ಬಂಡಾಯ ಶಾಸಕರ ನಡುವೆ ಫೈಟ್ ಜೋರಾಗಿದೆ. ಶಿವಸೇನೆ ಮತ್ತು ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಂತೆ ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದ ಶಿವಸೇನೆ ನಾಯಕರು ಬಂಡಾಯ ಶಾಸಕರಿಗೆ ಪಕ್ಷದ ಹೆಸರು ಮತ್ತು ಅದರ ನಾಯಕರ ಹೆಸರು ಬಳಸಿಕೊಳ್ಳುವ ಅವಕಾಶ ಇಲ್ಲ, ಮತ್ತು ಪಕ್ಷದ್ರೋಹ ಮಾಡಿದ ಏಕನಾಥ್ ಶಿಂಧೆ ವಿರುದ್ಧ ಕ್ರಮಕ್ಕೆ ತಿರ್ಮಾನ ಮಾಡಲಾಗಿತ್ತು. ಬಂಡಾಯ ಶಾಸಕರು ಶಿವಸೇನೆ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಿರಲು ಸೂಚಿಸುವಂತೆ ಮೂಲ ಶಿವಸೇನೆ ನಾಯಕರು ಚುನಾವಣೆ ಆಯೋಗದ ಮೊರೆ ಕೂಡಾ ಹೋಗಿದ್ದಾರೆ.