ಬೆಳಗಾವಿ: ಗಡಿ ವಿವಾದ ಇತ್ಯರ್ಥಪಡಿಸುವಂತೆ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಗಡಿ ಭಾಗದಲ್ಲಿ ನಡೆಯುವ ಮರಾಠಿ ಸಾಹಿತ್ಯ ಸಮ್ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಹಾ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಹೇಳಿಕೆ ನೀಡುವ ಮೂಲಕ ಚಂದಗಡದ ಎನ್ಸಿಪಿ ಶಾಸಕ ರಾಜೇಶ ಪಾಟೀಲ ಮತ್ತೆ ಉದ್ಧಟತನ ಮೆರೆದಿದ್ದಾರೆ.
ಬೆಳಗಾವಿ ತಾಲೂಕಿನ ಉಚಗಾಂವನಲ್ಲಿ ಭಾನುವಾರ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮರಾಠಿಯಲ್ಲಿ ದಾಖಲೆಗಳನ್ನು ನೀಡುವಂತೆ ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ನಡೆದ 18ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಠರಾವು ಕೈಗೊಳ್ಳಲಾಗಿದೆ. ಈ ಮೂಲಕ ಮತ್ತೆ ಗಡಿಯಲ್ಲಿ ಕನ್ನಡಿಗರ ಭಾವನೆಗಳನ್ನು ಕೆಣಕುವ ಕಾರ್ಯಕ್ಕೆ ಮಹಾರಾಷ್ಟ್ರ ಶಾಸಕ ಹಾಗೂ ಮುಖಂಡರು ಮುಂದಾಗಿದ್ದಾರೆ.
ನನ್ನ ತಂದೆ ಶಾಸಕ ಆದಾಗ ಗಡಿಭಾಗದ ಮರಾಠಿ ಜನರನ್ನು ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕರ್ನಾಟಕದ ಗಡಿಭಾಗ ಮಹಾರಾಷ್ಟ್ರದಲ್ಲಿ ಇದ್ದಿದ್ದರೆ ಬೆಳಗಾವಿ ಶಾಸಕನಾಗಿರುತ್ತಿದ್ದೆ ಎಂದು ಹೇಳಿದರುವುದನ್ನು ಸ್ಮರಿಸಿದರು. ಆದರೆ ಆ ವೇಳೆ ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಗಡಿ ವಿವಾದ ಬಗೆಹರಿಸಲು ಆಗಿನ ಸರ್ಕಾರ ಮುಂದೆ ಬರಲಿಲ್ಲ. ಹೀಗಾಗಿ ಮಹಾರಾಷ್ಟ್ರದ ರಾಜಕೀಯ ನಾಯಕರ ಗಮನ ಸೆಳೆಯಲು ನಾನೂ ಸಹ ಗಡಿಭಾಗದ ಮರಾಠಿಗರನ್ನು ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿವಿವಾದ ಸುಪ್ರೀಂ ಕೋರ್ಟಿನಲ್ಲಿದೆ. ದೀರ್ಘಕಾಲದ ವಿವಾದದಿಂದ ಎರಡು ಭಾಷಿಕರ ಮಧ್ಯೆ, ಎರಡು ರಾಜ್ಯಗಳ ಮಧ್ಯೆ ವೈರತ್ವ ಭಾವನೆ ನಿರ್ಮಾಣವಾಗಿದೆ. ಆದ್ದರಿಂದ ಗಡಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಒತ್ತಾಯಿಸಬೇಕು. ಗಡಿ ಭಾಗದಲ್ಲಿ ಶೇ.15ಕ್ಕಿಂತ ಹೆಚ್ಚಿರುವ ಮರಾಠಿಗರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಮರಾಠಿ ದಾಖಲಾತಿ ನೀಡುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.
ಸರ್ವ ಭಾಷಿಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು ಮತ್ತು ಗಡಿಭಾಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಹಾಗೂ ಮರಾಠಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದು ಸಾಹಿತ್ಯ ಸಮ್ಮೇಳನದಲ್ಲಿ ಠರಾವ್ ಕೈಗೊಳ್ಳಲಾಗಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಹೊರಡಿಸಿದ ಠರಾವುಗಳನ್ನು ನಿಮ್ಮ ಪ್ರತಿನಿಧಿಯಾಗಿ ಈ ನಾಲ್ಕು ಠರಾವುಗಳನ್ನು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಎನ್ಸಿಪಿ ಶಾಸಕ ಪಾಟೀಲ ಭರವಸೆ ನೀಡಿದ್ದಾರೆ.