ಗದಗ: ಕಳಸಾ ಬಂಡೂರಿ, ಮಹದಾಯಿ ಹೋರಾಟಗಾರರಿಗೆ ಮತ್ತೆ ನರಗುಂದ ಜೆಎಮ್ಎಫ್ಸಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ನರಗುಂದ ತಾಲೂಕಿನ 32 ರೈತರು ಇಂದೇ ಜೆಎಮ್ಎಫ್ಸಿ ಕೋರ್ಟ್ಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ.
ವಿಪರ್ಯಾಸವೆಂದರೆ ಹೊರಾಟದಲ್ಲಿ ಇಲ್ಲದೆ ಇರುವವರ ಮೇಲೆಯೂ ಕೇಸ್ ದಾಖಲಿಸಿ ಸಮನ್ಸ್ ಜಾರಿ ಮಾಡಲಾಗಿದೆ. 108 ಸಿಬ್ಬಂದಿ, ಸೈನಿಕ ಹಾಗೂ ಎಂಜಿನೀಯರ್ ಮೇಲೆ ಸಮನ್ಸ್ ಜಾರಿ ಮಾಡಲಾಗಿದೆ.
ನರಗುಂದ ತಾಲೂಕಿನ ಜಗಾಪೂರ ಗ್ರಾಮದ ಸೈನಿಕ ಶಂಕರಗೌಡ ಸಿದ್ದನಗೌಡ್ರ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ಗ್ರಾಮದ ಕುಮಾರ ಬಾರಕೇರ್ ಉಡಪಿಯಲ್ಲಿ 108 ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ದಾರೆ. ಇನ್ನು ರೋಣ ಮೂಲದ ಚರಣ್ ರಾಜ್ ಜಾಣಮಟ್ಟಿ ತೊರಣಗಲ್ ನಲ್ಲಿ ಎಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೂ ಸಮನ್ಸ್ ಜಾರಿಯಾಗಿರುವುದು ದುರದೃಷ್ಟಕರ.
ಹೋರಾಟಗಾರರ ಮೇಲೆ ಐಪಿಸಿ ಕಲಂ 143, 147, 323, 353, 427, 436, 504, 506, 149 ರ ಕೇಸ್ ದಾಖಲು ಮಾಡಿದೆ. ಹಿಂದೆ ಸಿಎಂ ಸಿದ್ದರಾಮಯ್ಯನವರು ರೈತ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆದುಕೊಳ್ಳುವುದಾಗಿ ಹೇಳಿದ್ದರು. ಆದರೆ ಮತ್ತೆ ನೋಟೀಸ್ ನೀಡಿ ಇಂದೇ ಕೋರ್ಟ್ ಗೆ ಹಾಜರಾಗುವಂತೆ ಆದೇಶಿಸಿದ್ದು, ಸರ್ಕಾರದ ನಡಾವಳಿಗಳನ್ನ ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.