ಬೆಂಗಳೂರು: ಕಾಂಗ್ರೆಸ್ನವರು (Congress) ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ವಾರ್ ಶುರು ಮಾಡಿದ್ದಾರೆ. ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ ನಮ್ಮ ಬಳಿಯು ಕಾರ್ಯಕರ್ತರಿದ್ದಾರೆ, ಹುಡುಗರಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಮಂಜುನಾಥ್ (Ex MLA Manjunath) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಪೋಸ್ಟರ್ ಮೂಲಕ ಅಪಪ್ರಚಾರ ನಡೆಯುತ್ತಿದೆ. ಈ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಈ ಹಿಂದೆ ಪೇ ಸಿಎಂ ಪೋಸ್ಟರ್ ಅಂಟಿಸಿ ಅಪಪ್ರಚಾರ ಮಾಡಿದ್ರು. ಈ ಪೋಸ್ಟರ್ ಅಪಪ್ರಚಾರದ ಬಗ್ಗೆ ನಾವೆಲ್ಲಾ ಸಭೆ ನಡೆಸಿದ್ದೇವೆ. ನಾವು ಈ ರೀತಿಯ ಪೋಸ್ಟರ್ ಮಾಡಿ ಅಂಟಿಸುವುದು ದೊಡ್ಡ ಕೆಲಸ ಅಲ್ಲ. ನಮ್ಮ ಬಳಿಯೂ ಕಾರ್ಯಕರ್ತರ ಪಡೆ ಇದೆ ಎಂದರು.
ಪೋಸ್ಟರ್ ಎಲ್ಲಿ ಪ್ರಿಂಟ್ ಮಾಡಿಸಬೇಕು?. ಹೇಗೆ ಮಾಡಿಸಬೇಕು ಅನ್ನೋದು ನಮಗೆ ಗೊತ್ತಿದೆ. ನಾವು ಸರ್ಕಾರಕ್ಕೆ, ಗೃಹ ಇಲಾಖೆಗೆ ಎಚ್ಚರಿಕೆ ಕೊಡ್ತಾ ಇದ್ದೀವಿ. ಇದು ಇಲ್ಲಿಗೆ ಮುಗಿಯಬೇಕು. ನಾವು ಮೈ ಕೊಡವಿ ನಿಂತರೆ ಮುಂದೆ ಏನಾಗುತ್ತೆ. ಮುಂದೆ ಯಾವ ಯಾವ ರೀತಿಯ ವೆರೈಟಿ ಪೋಸ್ಟರ್ ಡಿಸೈನ್ ಮಾಡಿಸಿ ಅಂಟಿಸಬೇಕು ನಮಗೆ ಗೊತ್ತಿದೆ. ಇದರ ಹಿಂದೆ ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಮತ್ತು ಅವರ ಬೆಂಬಲಿಗರು ಇದ್ದಾರೆ ಎಂದು ಹೇಳಿದರು.
ಪೋಸ್ಟರ್ ಗಳ ಬಗ್ಗೆ ನಮ್ಮ ನಾಯಕರು ಮಾತನಾಡಬೇಡಿ ಅಂದಿದ್ರು. ಅದಕ್ಕೆ ನಾವು ಸುಮ್ಮನಿದ್ದೇವೆ. ಈ ಪೋಸ್ಟರ್ ಗಳು (Poster) ಇಲ್ಲಿಗೆ ನಿಲ್ಲಲಿಲ್ಲ ಅಂದ್ರೆ ಮುಂದೆ ಮಾರಾಮಾರಿ ನಡೆಯಬಹುದು. ಅದಕ್ಕೆ ಸರ್ಕಾರವೇ ಹೊಣೆ ಆಗುತ್ತೆ. ನಾವು ಬಳೆತೊಟ್ಟುಕೊಂಡು ಬಂದಿಲ್ಲಾ ನಾವು ರಾಜಕೀಯ ಮಾಡೋದಕ್ಕೆ ಬಂದಿದ್ದೇವೆ. ಬೆಂಗಳೂರಲ್ಲಿ ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಜನರಿಗೆ ತಿಳಿಸ್ತಿದ್ದಾರೆ. ಇವರು ಮಾಡಿದೆಲ್ಲಾ ಸರಿ ಅಂದಿದ್ರೆ ಇದ್ಯಾವುದು ಮಾಡ್ತಿರಲಿಲ್ಲ ಎಂದು ತಿಳಿಸಿದರು.
ಅಧಿಕಾರ ಇದೆ ಅಂತ ಮಾಡಬೇಡಿ. ರಾಜಕಾರಣದಲ್ಲಿ ಎಲ್ಲರು ಸಾಚಾಗಳಲ್ಲ. ವೈಯಕ್ತಿಕ ಜೀವನವೇ ಬೇರೆನಿಮ್ಮದು ವೈಯಕ್ತಿಕ ಬದುಕಿದೆ ಮುಜುಗರಕ್ಕೀಡಾಗ್ತಿರಾ ಎಂದು ಎಚ್ಚರಿಸಿದ್ದಾರೆ. ಪೇ ಸಿಎಂ ಇರುವ ಕ್ಯೂ ಆರ್ ಇರುವ ಪೋಸ್ಟರ್ ಅಂಟಿಸಿದ್ರು. ಎಲೆಕ್ಷನ್ ನಲ್ಲಿ ಸ್ಮಾರ್ಟ್ ಕಾರ್ಡ್ಗಳನ್ನ ನೀಡಿದ್ದ ಏಜೆನ್ಸಿಯೇ ಇವತ್ತು ಕೆಲಸ ಮಾಡುತ್ತಿದೆ. ಆ ತರ ಏಜೆನ್ಸಿಗಳನ್ನ ಇಟ್ಟುಕೊಂಡು ಕೆಟ್ಟಕೆಲಸ ಮಾಡೋದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.