ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್ ಮನೆಯ ಗಾರ್ಡನ್ ನಲ್ಲಿ ಇದ್ದ ಬೆಲೆ ಬಾಳುವ ಆರು ಶ್ರೀ ಗಂಧದ ಮರವನ್ನು ಕತ್ತರಿಸಿ ಕಳ್ಳರು ಸಾಗಾಟ ಮಾಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಕುಂಬೂರು ಗ್ರಾಮದಲ್ಲಿ ತಡರಾತ್ರಿ ಕಳ್ಳತನ ನಡೆದಿದೆ.
ವಿಧಾನಸಭೆ ಅಧಿವೇಶನ ಹಿನ್ನೆಲೆ ಮನೆಗೆ ಬೀಗ ಹಾಕಿಕೊಂಡು ಪತ್ನಿಯ ಸಮೇತ ಬೆಂಗಳೂರಿಗೆ ಅಪ್ಪಚ್ಚು ರಂಜನ್ ಬಂದಿದ್ದಾರೆ. ಇದನ್ನೇ ಗಮನಿಸಿದ ಕಳ್ಳರು ಮನೆಯ ವಾಚ್ ಮ್ಯಾನ್ ಮಲಗಿದ ಮೇಲೆ ಬಂದು ಮನೆಯ ಗಾರ್ಡನ್ ನಲ್ಲಿ ವಿವಿಧ ಕಡೆ ಇದ್ದ ಮರಗಳನ್ನು ಕಡಿದು ಒಂದೇ ರಾತ್ರಿಯಲ್ಲಿ ಹೊತ್ತುಕೊಂಡು ಹೋಗಿದ್ದಾರೆ.
ಅಂದಾಜು 2 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಆರು ಶ್ರೀಗಂಧ ಮರವನ್ನು ಕತ್ತರಿಸಿ ಕದ್ದೊಯ್ದಿರುವ ಕಳ್ಳರು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಕೃತ್ಯ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.