ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಪ್ರಬಲ ಸಚಿವ ಸ್ಥಾನಾಕಾಂಕ್ಷಿಗಳಾಗಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ವಿಕಾಸಸೌಧದಲ್ಲಿ ಭೇಟಿಯಾದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ರೇಣುಕಾಚಾರ್ಯ ಅವರ ಕೊಠಡಿಯಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಪರಸ್ಪರ ಚರ್ಚೆ ನಡೆಸಿದರು.
ಚರ್ಚೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ, ಇದು ನಮ್ಮ ಆಕಸ್ಮಿಕ ಸೌಜನ್ಯದ ಭೇಟಿ. ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿಗಳು. ಅವರು ಹಿರಿಯರು ಹಾಗೂ ಕೇಂದ್ರ ಸಚಿವರಾಗಿದ್ದರು. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಚರ್ಚೆ ಮಾಡಿದೆವು. ಮೇಕೆದಾಟು ಪಾದಯಾತ್ರೆಯ ಮೂಲಕ ಅಧಿಕಾರಕ್ಕೆ ಬಂದ್ವಿ ಎಂಬಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದಾರೆ. ಡಿ.ಕೆ.ಶಿವಕುಮಾರ್ ವೇಗ ತಡೆಯಲು ಚರ್ಚೆ ನಡೆಸಿದೆವು ಎಂದರು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ
ಕಾಲ ಬಂದ್ರೆ ಹೈಕಮಾಂಡ್ ಭೇಟಿ: ಕಾಲ ಬಂದ್ರೆ ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತೇವೆ. ಯತ್ನಾಳ್ ಹಿರಿಯರಿದ್ದಾರೆ. ಅವರು ಮಂತ್ರಿಯಾಗಲಿ ಎಂದು ಶುಭ ಕೋರುತ್ತೇನೆ ಎಂದರು.
ಇದೇ ವೇಳೆ ಸಂಪುಟ ಪುನರ್ ರಚನೆ ವಿಚಾರದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಯಾವ ಸಚಿವರ ವಿರುದ್ಧವೂ ಆಕ್ರೋಶ ಇಲ್ಲ. ಸಂಘಟನೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡಿದವರನ್ನು ಮುಂದುವರೆಸುವುದು ಒಳ್ಳೆಯದು. ಅಧಿಕಾರಕ್ಕೋಸ್ಕರ ಇದ್ದವರು, ಸ್ವಾರ್ಥಕೊಸ್ಕರ ಇದ್ದವರನ್ನು ಕೈಬಿಡಬೇಕು. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇವೆ, ಸಿಎಂ ಜೊತೆಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಮುಂದಿನ ದಿನದಲ್ಲಿ ಬಿಜೆಪಿ ದೇಶದಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು
ಎಲ್ಲಾ ಶಾಸಕರು ಮಾತನಾಡೋಕೆ ಆಗ್ತಿಲ್ಲ ಎಂದು ಬಹಳಷ್ಟು ಶಾಸಕರು ನಮಗೆ ಹೇಳಿದ್ದಾರೆ. ಹೀಗಾಗಿ ನಾವಿಬ್ಬರು ಸಚಿವ ಸಂಪುಟದ ಬಗ್ಗೆ ಮಾತನಾಡಿದ್ದೇವೆ. ಆದರೆ ಬಿಜೆಪಿಯಲ್ಲಿ ಸಹಿ ತೆಗೆದುಕೊಳ್ಳುವ ಸಂಸ್ಕೃತಿ ಇಲ್ಲ ಎಂದರು.
ರೇಣುಕಾಚಾರ್ಯಗೆ ಆಶೀರ್ವಾದ!: ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಈಗ ಏನೂ ಹೇಳಲು ಆಗಲ್ಲ. ಪಂಚರಾಜ್ಯ ಮುಗಿದ ಮೇಲೆ ಆಗುತ್ತೋ ಅಥವಾ ಅದಕ್ಕಿಂತ ಮೊದಲೇ ಆಗುತ್ತೋ ನೋಡೋಣ. ಆದ್ರೆ ಒಳ್ಳೆಯ ಬೆಳವಣಿಗೆ ಆಗುತ್ತೆ. ರೇಣುಕಾಚಾರ್ಯ ಮಂತ್ರಿಯಾಗ್ಲಿ ಅಂತ ಆಶೀರ್ವಾದ ಮಾಡುತ್ತೇನೆ. ರೇಣುಕಾಚಾರ್ಯ ಯಾರಾದರೂ ನಾಯಕತ್ವ ಒಪ್ಪಿಕೊಂಡ್ರೆ ಅವರ ನಾಯತ್ವದಲ್ಲೇ ಇರ್ತಾರೆ ಎಂದರು.
ಬಿಎಸ್ವೈ ನಾಯಕತ್ವ ಅಥವಾ ಬೊಮ್ಮಾಯಿ ನಾಯಕತ್ವ ರೇಣುಕಾಚಾಯ್ ಒಪ್ಪಿಕೊಂಡಿದ್ದಾರಾ ಎಂಬ ಪ್ರಶ್ನೆಗೆ, ಅವರು ಬಿಜೆಪಿ ನಾಯಕತ್ವ ಒಪ್ಪಿಕೊಂಡಿದ್ದಾರೆ ಎಂದರು. ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡುತ್ತೆ ನೋಡೋಣ. ಗುಜರಾತ್ ಮಾದರಿಯಲ್ಲಿ ಮಾಡುತ್ತೋ ಅಥವಾ ಕರ್ನಾಟಕಕ್ಕೆ ಬೇರೆ ಮಾದರಿ ಮಾಡುತ್ತೋ ನೋಡೋಣ ಎಂದರು.
ಸಚಿವ ಪುನರ್ ರಚನೆ ಇನ್ನು 15 ದಿವಸದಲ್ಲಿ ಆದ್ರೆ ಒಳ್ಳೆಯದು. ಮಾರ್ಚ್ ನಂತ್ರ ಸಚಿವ ಸಂಪುಟ ರಚನೆ ಆದ್ರೆ ಏನೂ ಉಪಯೋಗ ಇಲ್ಲ, ಮಾಡುವುದಿದ್ರೆ ಈಗಲೇ ಮಾಡಿ. ಇಲ್ಲ ಅಂದರೆ ಶಾಸಕರಾಗಿ ಕೊನೆ ಪಕ್ಷ ಒಂದು ವರ್ಷ ಇದ್ದಾಗ ಮಾಡಿದ್ರೆ ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡಬಹುದು ಎಂದರು. ಇದರ ಜೊತೆಗೆ ಮೊದಲು ಕೊರೊನಾವನ್ನು ಸಮರ್ಥವಾಗಿ ಎದುರಿಸಬೇಕು ಎಂದು ಹೇಳಿದರು.