ತಿರುವನಂತಪುರಂ: ತಮ್ಮ ಪ್ರೀತಿಯನ್ನು ಪೋಷಕರು ನಿರಾಕರಿಸಿದ್ದಕ್ಕೆ ಪ್ರೇಮಿಗಳು ಕೇರಳದ ಕಣ್ಣೂರಿನ ಕಂಜಿರಕೊಳ್ಳಿ ಶಶಿಪಾರಾದ ಪ್ರವಾಸಿತಾಣದಲ್ಲಿ 200 ಅಡಿ ಆಳದ ಪ್ರಾಪತಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಮಲ್ ಕುಮಾರ್(22) ಹಾಗೂ ಅಶ್ವತಿ(20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇಬ್ಬರೂ ಪಾಪಿನಿಸೆರಿ ನಿವಾಸಿಗಳಾಗಿದ್ದು, ಪ್ರವಾಸಿತಾಣದಲ್ಲಿರುವ ಪ್ರಪಾತದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮಂಗಳವಾರ ಮಧ್ಯಾಹ್ನ ಕೆಎಲ್ 13ಎಡಿ 6338 ನಂಬರ್ ನ ಬಜಾಜ್ ಪಲ್ಸರ್ ಬೈಕ್ ಕಂಡುಬಂದಿತ್ತು. ಬೈಕ್ ನೋಡಿ ಅಲ್ಲಿನ ಸ್ಥಳೀಯರು ಅಕ್ಕಪಕ್ಕ ಹುಡುಕಾಟ ನಡೆಸಿದಾಗ ಶಶಿಪಾರಾದ ಪ್ರವಾಸಿತಾಣದ 200 ಅಡಿ ಆಳದಲ್ಲಿ ಪ್ರೇಮಿಗಳ ಮೃತದೇಹ ಪತ್ತೆಯಾಗಿದೆ.
ಕಮಲ್ ಹಾಗೂ ಅಶ್ವತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಕುಟುಂಬದವರು ಇವರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಹಾಗಾಗಿ ಅಶ್ವತಿ ದುಪ್ಪಟಾದಲ್ಲಿ ಇಬ್ಬರು ಬಂಧಿಯಾಗಿ ಕಟ್ಟಿಕೊಂಡು ಶಶಿಪಾರಾದಲ್ಲಿರುವ ಪ್ರಪಾತಕ್ಕೆ ಜಿಗಿದಿದ್ದಾರೆ. ಮೃತದೇಹಗಳು ಮರವೊಂದಕ್ಕೆ ಸಿಕ್ಕಿಕೊಂಡಿತ್ತು ಎಂದು ವರದಿಯಾಗಿದೆ.
ಕಮಲ್ ಹಾಗೂ ಅಶ್ವತಿ ಕಾಣೆಯಾಗಿದ್ದರಿಂದ ಇಬ್ಬರ ಮನೆಯವರು ಮಂಗಳವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪಯ್ಯವೂರ್ ಪೊಲೀಸರು ಇರಿಟಿ ರಕ್ಷಣಾ ತಂಡದಿಂದ ಪ್ರೇಮಿಗಳ ಮೃತದೇಹವನ್ನು ಹೊರ ತೆಗೆದಿದ್ದಾರೆ.