ಕಿರುತೆರೆಯ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರದ ಅತಿಥಿಯಾಗಿ ತಮ್ಮ ಜೀವನ ಕಥೆಯನ್ನ ಬಿಚ್ಚಿದ್ದಾರೆ. ಪತ್ನಿ ಜ್ಯೋತಿ ತ್ಯಾಗದ ಬಗ್ಗೆ ನಟ ಸ್ಮರಿಸಿದ್ದಾರೆ. ಯಾವ ಫಿಲ್ಮಿಂ ಸ್ಟೋರಿಗೂ ಕಮ್ಮಿಯಿಲ್ಲ ಪ್ರೇಮ್ ಲವ್ ಲೈಫ್ ಸ್ಟೋರಿ. ಅಷ್ಟಕ್ಕೂ ಜ್ಯೋತಿ (Wife Jyothi) -ಪ್ರೇಮ್ಗೆ ಲವ್ (Love) ಆಗಿದ್ದು ಹೇಗೆ? ಇಲ್ಲಿದೆ ನೋಡಿ..
ಬಡ ಕುಟುಂಬದಲ್ಲಿ ಹುಟ್ಟಿದ ಪ್ರೇಮ್, ತಂಗಿಯರ ಓದು, ಅವರ ಮದುವೆಗಾಗಿ ಹತ್ತನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ತಮ್ಮ ಕುಲಕಸುಬಾದ ನೇಕಾರಿಕೆ ಮಾಡಲು ತೊಡಗಿದ್ದರು. ಹೀಗೆ ಒಮ್ಮೆ ಊಟಕ್ಕೆ ಹೋಗುವಾಗ ಪ್ರಾವಿಜನ್ ಸ್ಟೋರ್ ಬಳಿ ಒಬ್ಬ ಹುಡುಗಿಯೊಬ್ಬಾಕೆಯನ್ನು ಕಂಡಿದ್ದಾರೆ. ಬಹಳ ಮುದ್ದಾಗಿದ್ದ ಆ ಹುಡುಗಿಯನ್ನು ಕಂಡು ಈಕೆಯೇ ನನ್ನ ಹೆಂಡತಿಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡು ಮುಂದೆ ಹೋಗಿದ್ದಾರಷ್ಟೆ, ಅಷ್ಟರಲ್ಲಿ ಹುಡುಗನೊಬ್ಬ ಬಂದು ಅಕ್ಕ ನಿಮ್ಮ ಬಳಿ ಮಾತನಾಡಬೇಕಂತೆ ಎಂದಿದ್ದಾರೆ. ಪ್ರೇಮ್ ನಿಮಿಷದ ಹಿಂದೆ ನೋಡಿದ್ದ ಹುಡುಗಿಯೇ ಪ್ರೇಮ್ ಬಳಿ ಬಂದು ಟ್ಯೂಷನ್ ಕುರಿತಾಗಿ ಏನೋ ಮಾತನಾಡಿಸಿ ಹೆಸರು ಕೇಳಿ ಹೋಗಿದ್ದಾರೆ. ಆ ಹುಡುಗಿಯೇ ಜ್ಯೋತಿ.
ಆದರೆ ಜ್ಯೋತಿ ಸಹ ಯಾವುದೋ ಮದುವೆಯಲ್ಲಿ (Wedding) ಪ್ರೇಮ್ರನ್ನು ನೋಡಿದ್ದರಂತೆ. ಆ ಹುಡುಗಿಯ ಸಂಬಂಧಿಯೊಬ್ಬರು ಮದುವೆಯಲ್ಲಿ ವಧು-ವರರ ಜೊತೆ ಪ್ರೇಮ್ ತೆಗೆಸಿಕೊಂಡಿದ್ದ ಫೋಟೊ ತೋರಿಸಿ ಈ ಹುಡುಗನನ್ನು ನಾನು ಮದುವೆಯಾಗುತ್ತೀನಿ ಎಂದಿದ್ದರಂತೆ ಜ್ಯೋತಿ ಬಳಿ, ಆ ಫೋಟೊ ನೋಡಿದ ಜ್ಯೋತಿ ಸಹ ಪ್ರೇಮ್ರನ್ನು ಇಷ್ಟಪಟ್ಟಿದ್ದಾರೆ. ಹೀಗೆ ಪ್ರಾವಿಜನ್ ಸ್ಟೋರ್ ಬಳಿ ಆದ ಪರಿಚಯ ಹೀಗೆ ಮುಂದುವರೆದಿದೆ. ಆಗೊಮ್ಮೆ ಪ್ರೇಮ್, ಜ್ಯೋತಿಗೆ ಪತ್ರವೊಂದನ್ನು ಬರೆದು ನನಗೆ ಜೀವನದಲ್ಲಿ ಬಹಳ ಜವಾಬ್ದಾರಿಗಳಿವೆ, ನಾನು ತಂಗಿಯರ ಮದುವೆ ಮಾಡಬೇಕು ನಾನು ಇನ್ನೊಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದೀನಿ ನನ್ನನ್ನು ಮರೆತುಬಿಡು ಎಂದೆಲ್ಲ ಪತ್ರದಲ್ಲಿ ಬರೆದಿದ್ದರಂತೆ. ಆದರೆ ಅದರಲ್ಲಿ ಬಹಳ ತಪ್ಪುಗಳಿದ್ದಿದ್ದನ್ನು ಕಂಡು ಆ ತಪ್ಪುಗಳನ್ನೆಲ್ಲ ರೌಂಡ್ ಹಾಕಿದ್ದರಂತೆ ಜ್ಯೋತಿ. ಅದಾದ ಬಳಿಕ ಇಬ್ಬರೂ ಭೇಟಿಯಾಗಿ ಈಗಲೇ ಪ್ರೀತಿ-ಗೀತಿ ಎಲ್ಲ ಬೇಡ ಇನ್ನೆರಡು ವರ್ಷ ಹೀಗೆ ಗೆಳೆಯರಾಗಿರೋಣ ಆ ನಂತರವೂ ಪ್ರೀತಿ ಉಳಿದಿದ್ದರೆ ಮದುವೆಯಾಗೋಣ ಎಂದುಕೊಂಡಿದ್ದಾರೆ. ಆದರೆ ಆ ಪ್ರಾಮಿಸ್ ಅನ್ನು ಬಹಳ ಬೇಗ ಅವರೇ ಮುರಿಯುವ ಪರಿಸ್ಥಿತಿ ಎದುರಾಗುತ್ತದೆ.
ಇಬ್ಬರ ಲವ್ ವಿಚಾರ ವಿಷಯ ಜ್ಯೋತಿಯವರ ಮನೆಯವರಿಗೆ ಗೊತ್ತಾಗಿ ಗಂಡು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಆತಂಕಗೊಂಡ ಜ್ಯೋತಿ ಹಾಗೂ ಪ್ರೇಮ್ ಮನೆಯವರ ವಿರೋಧದ ನಡುವೆ ಮದುವೆ ಆಗಲು ನಿಶ್ಚಯಿಸಿ ಒಂದು ದಿನಾಂಕ ಗುರುತು ಮಾಡಿಕೊಂಡಿದ್ದಾರೆ. ಆದರೆ ಅದೇ ದಿನ ರಾಜ್ಕುಮಾರ್ ಅಪಹರಣ ಆದ ಕಾರಣ ಎಲ್ಲವೂ ಸ್ಥಬ್ಧವಾಗಿಬಿಟ್ಟಿದೆ. ಹಾಗಿದ್ದರೂ ಜ್ಯೋತಿ ತಮ್ಮನನ್ನು ಕರೆದುಕೊಂಡು ತಮ್ಮ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಬಂದುಬಿಟ್ಟರಂತೆ. ಪ್ರೇಮ್ ಸಹ ಗೆಳೆಯರ ಸಹಾಯದಿಂದ ಜ್ಯೋತಿಯವರನ್ನು ಮದುವೆಯೂ ಆಗಿಬಿಟ್ಟಿದ್ದಾರೆ. ಅದಾದ ಬಳಿಕ ಎರಡು ಕುಟುಂಬದವರನ್ನು ಕರೆಸಿ ಅಂದೇ ರಾಜಿ ಮಾಡಿಸಿ ಎಲ್ಲರನ್ನೂ ಒಪ್ಪಿಸಿದ್ದಾರೆ. ಅಳಿಯನ ಕಷ್ಟ ಗಮನಿಸಿ ಜ್ಯೋತಿಯವರ ತಾಯಿ, ಮಗಳು-ಅಳಿಯನಿಗೆ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ವರ್ಷ ಅತ್ತೆಯ ಮನೆಯಲ್ಲಿಯೇ ಪ್ರೇಮ್ ವಾಸವಿದ್ದರು. ಇದನ್ನೂ ಓದಿ:ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ಶ್ವಾನ ಇನ್ನಿಲ್ಲ
View this post on Instagram
ತನ್ನ ಉದ್ದಿಮೆಯಲ್ಲಿ ಬಹಳ ನಷ್ಟವಾಗಿ ಸುಮಾರು ಏಳೆಂಟು ಲಕ್ಷ ಸಾಲ ಮಾಡಿಬಿಟ್ಟರಂತೆ ಪ್ರೇಮ್. ಆಗ ಜ್ಯೋತಿ ಕೆಲಸಕ್ಕೆ ಹೋಗುತ್ತಿದ್ದರಂತೆ. ವರಮಹಾಲಕ್ಷ್ಮಿ ಹಬ್ಬದ ದಿನ ತಮಗೆ ಸಾಲ ಕೊಟ್ಟಿದ್ದ ಗೆಳೆಯ ಸಾಲವನ್ನು ತೀರಿಸುವಂತೆ ಒತ್ತಾಯಿಸಿದ್ದಾನೆ. ಆಗ ಪ್ರೇಮ್ ಪತ್ನಿಯ ಕಚೇರಿ ಬಳಿ ಹೋಗಿ ಪರಿಸ್ಥಿತಿ ವಿವರಿಸಿದ್ದಾರೆ. ಆಗ ಜ್ಯೋತಿ ತಮ್ಮ ಚಿನ್ನದ ತಾಳ ಬಿಚ್ಚಿಕೊಟ್ಟುಬಿಟ್ಟರಂತೆ. ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ಪ್ರೇಮ್ ಕಣ್ಣೀರು ಹಾಕಿದರು. ನಾನು ಸತ್ತು ಹೋಗಬಾರದ ಎಂದು ಎನಿಸಿತು ನನಗೆ. ಆ ದಿನ ನನ್ನ ಜೀವನದಲ್ಲಿ ಮತ್ತೆಂದೂ ಬರಬಾರದು ಎಂದರು ಪ್ರೇಮ್. ಆದರೆ ಆ ಸಂಕಷ್ಟದ ಸಮಯದಲ್ಲಿ, ಅದೂ ವರಮಹಾಲಕ್ಷ್ಮಿ ಹಬ್ಬದ ದಿನ ತಾಳಿ ನೀಡಿದ ಪತ್ನಿ ನನಗೆ ಎರಡನೇ ತಾಯಿಯಂತೆ ಎಂದರು. ಸಾಕಷ್ಟು ಎದುರಿಸಿದ ಬಳಿಕ ಪ್ರೇಮ್ಗೆ ನಟನೆ ಕೈಹಿಡಿಯಿತು. ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಆಗಿ ಮಿಂಚ್ತಿದ್ದಾರೆ.