ಚಿಕ್ಕಬಳ್ಳಾಪುರ: ವೀಕೆಂಡ್ ಲಾಂಗ್ ರೈಡ್ ಹೋಗಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 07 ರ ಶಿಡ್ಲಘಟ್ಟ ಫ್ಲೈಓವರ್ ಬಳಿ ನಡೆದಿದೆ.
ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಮಧು ಬೆಂಗಳೂರಿನಲ್ಲಿ ವಾಸವಾಗಿದ್ದರು. ವೀಕೆಂಡ್ ಎಂದು ಮಧು ತಮ್ಮ ಬೈಕ್ನಲ್ಲಿ ಲಾಂಗ್ ರೈಡ್ ತೆರೆಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹಿಂಬದಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
6 ಮಂದಿ ಸ್ನೇಹಿತರ ತಂಡ ವೀಕೆಂಡ್ ಹಿನ್ನೆಲೆ ಮೂರು ಬೈಕ್ಗಳ ಮೂಲಕ ಬೆಂಗಳೂರಿನಿಂದ ಲೇಪಾಕ್ಷಿಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಲಾರಿಯೊಂದು ಕೆಟ್ಟು ನಿಂತಿದ್ದು, ಅದನ್ನ ಗಮನಿಸದ ಬೈಕ್ ಸವಾರರು ಲಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದಾರೆ. ಅಪಘಾತಕ್ಕೀಡಾದ ರಭಸಕ್ಕೆ ಬೈಕ್ ಸವಾರ ಬಲಭಾಗದ ರಸ್ತೆಯ ಮೇಲೆ ಬಿದ್ದ ಪರಿಣಾಮ ಹಿಂಬದಿ ಬರುತ್ತಿದ್ದ ಲಾರಿ ಆತನ ಮೇಲೆ ಹರಿದು ಹೋಗಿದೆ.
ಬೈಕ್ ಸವಾರನ ಮೇಲೆ ಲಾರಿ ಹರಿದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಪಿಎಸ್ಐ ಒಂ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.