ಮೈಸೂರು: ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದ ಮೈಸೂರಿನ ಉಪನ್ಯಾಸಕನ (Lecturer) ಮತ್ತೊಂದು ಕರ್ಮಕಾಂಡ ಬಯಲಾಗಿದೆ. ದಾಳಿಯ ನಂತರ ಲೋಕಾಯುಕ್ತ ಹೇಳಿದ್ದು 8 ಕೋಟಿ ರೂ. ಅಕ್ರಮ ಆಸ್ತಿ. ಆದರೆ ಈ ಉಪನ್ಯಾಸಕನಿಂದ ಶಿಕ್ಷಕರಿಗೆ 70 ಕೋಟಿ ವಂಚನೆ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
40 ಲಕ್ಷ ರೂ. ಮೌಲ್ಯದ ಬರೋಬ್ಬರಿ 70 ನಿವೇಶನಗಳನ್ನು ಉಪನ್ಯಾಸಕ ಮಹದೇವಸ್ವಾಮಿ (Mahadevaswamy) ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮಹದೇವಸ್ವಾಮಿ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದು, ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರು ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೂಡ ಆಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಡಲೆಕಾಯಿ ಪರಿಷೆಯಲ್ಲಿ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಕ್ರಮ: ರಾಮಲಿಂಗಾ ರೆಡ್ಡಿ ಭರವಸೆ
ಸಂಘದ ಅಧ್ಯಕ್ಷನಾಗಿ ಶಿಕ್ಷಕರಿಗೆ ನೀಡಬೇಕಾದ ನಿವೇಶನಗಳನ್ನು ಪತ್ನಿ, ಮಕ್ಕಳು ಸಂಬಂಧಿಕರಿಗೆ ಬರೆದುಕೊಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಮೈಸೂರಿನ ಹೊರ ವಲಯದ ಗುರುಕುಲ ಬಡಾವಣೆಯಲ್ಲಿ 70 ಶಿಕ್ಷಕರಿಗೆ ಮೋಸವಾಗಿದ್ದು ಸರಾಸರಿ 40 ಲಕ್ಷ ರೂ. ಮೌಲ್ಯದ 70 ನಿವೇಶನಗಳಿಂದ 28 ಕೋಟಿ ರೂ. ಮೋಸವಾಗಿದೆ.
ಮತ್ತೊಂದು ಬಡಾವಣೆ ನಿರ್ಮಾಣಕ್ಕೆ 2014 ರಿಂದ 40 ಕೋಟಿ ರೂ. ಹಣ ವಸೂಲಿ ಮಾಡಿದ್ದು ಅದಕ್ಕಾಗಿ ಭೂಮಿಯನ್ನೇ ಖರೀದಿ ಮಾಡಿಲ್ಲ. ಪೊಲೀಸರು, ಸಹಕಾರ ಇಲಾಖೆ ಯಾರಿಗೂ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುರುಕುಲ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆರೋಪಿಸಿದ್ದಾರೆ.