ಕೊರೋನಾ ಸಂದರ್ಭದಲ್ಲಿ ದೇಶಾದ್ಯಂತ ಜಾರಿಯಾದ 21 ದಿನಗಳ ಲಾಕ್ಡೌನ್ (Lockdown) ಪ್ರತಿಯೊಬ್ಬರ ಜೀವನದಲ್ಲೂ ದೊಡ್ಡ ಆರ್ಥಿಕ ಹೊಡೆತ ಹಾಗೂ ಗೊಂದಲಗಳನ್ನು ಸೃಷ್ಟಿಸಿತ್ತು. ಸಾಮಾನ್ಯ ಜನರ ಬದುಕು-ಬವಣೆ ಹಾಗೂ ಅವರು ಎದುರಿಸಿದ ನೈಜ ಸವಾಲುಗಳನ್ನು ಸೂಚ್ಯಂಕವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಚಿತ್ರವೇ ‘ಲಾಕ್ಡೌನ್ 21 ಡೇಸ್’.
ಈ ಹಿಂದೆ ಹಲವು ಯಶಸ್ವಿ ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಜೋಡಿ ನಿರ್ದೇಶಕರಾದ ಮಧುಮೋಹನ್ ಮತ್ತು ಮಾಚಯ್ಯ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ಶ್ರೀ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಲಾಕ್ಡೌನ್ 21 ಡೇಸ್ (Lockdown 21 Days) ಚಿತ್ರದ ಮುಹೂರ್ತ ಸಮಾರಂಭ ನೇರವೇರಿತು. ನಮ್ ಗಣಿ ಬಿಕಾಂ ಪಾಸ್ ನಿರ್ದೇಶಕ ಅಭಿಶೇಕ್ ಶೆಟ್ಟಿಯಿಂದ ಲಾಕ್ಡೌನ್ 21 ಡೇಸ್ ಚಿತ್ರಕ್ಕೆ ಚಾಲನೆ ನೀಡಲಾಯಿತು. ಈ ಚಿತ್ರದಲ್ಲಿ ಅನಿಲ್ ಸಿ ಕೆ, ಅರುಣ ಯಾದವ್, ಪ್ರಿಯಾಂಕಾ ರಾಜ್, ಮಂಜು ನಂಜನಗೂಡು, ಅಕ್ಷಯ್, MK ಮಠ, ಚಂದನ್ ಗೌಡ ಮುಖ್ಯ ಪಾತ್ರಗಳಲ್ಲಿ ಅಭಿನಯಿಸ್ತಿದ್ಧಾರೆ. ಇದನ್ನೂ ಓದಿ: ವಾಹನ ಏರಿ ರಾಜ್ಯ ಸುತ್ತೋಕೆ ಹೊರಟ `ಕಾಮನ್ ಮ್ಯಾನ್’

ದೇಶವೇ ಸ್ತಬ್ಧವಾಗಿದ್ದ 21 ದಿನಗಳ ಕಠಿಣ ಲಾಕ್ಡೌನ್ ಸಮಯದಲ್ಲಿ ಅರಳುವ ಒಂದು ಸುಂದರ ಪ್ರೇಮಕಥೆ ಹಾಗೂ ಮಾನವ ಸಂಬಂಧಗಳ ಗಟ್ಟಿತನವನ್ನು ಈ ಸಿನಿಮಾದಲ್ಲಿ ಆಕರ್ಷಕವಾಗಿ ಹೆಣೆಯಲಾಗಿದೆ. ಅರುಣಾ ಯಾದವ್ ಫಿಲ್ಮ್ ಹೌಸ್ ಬ್ಯಾನರ್ ಅಡಿಯಲ್ಲಿ ಮಹಿಳಾ ನಿರ್ಮಾಪಕಿ ಅರುಣಾ ಯಾದವ್ ಅವರು ಅತ್ಯಂತ ಸದಭಿರುಚಿಯಿಂದ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಶಾರ್ಟ್ ಫಿಲ್ಮ್ಗಳನ್ನು ನಿರ್ದೇಶಿಸಿದ ನಂತರ ದೊಡ್ಡಮಟ್ಟದ ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು. ನನ್ನ ಈ ಕನಸಿಗೆ ಸಾಥ್ ನೀಡಿ, ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು ಎಂದಿದ್ದಾರೆ ನಿರ್ದೇಶಕ ಮಧುಮೋಹನ್ ಮಾಚಯ್ಯ.
ʻಒಬ್ಬ ಮಹಿಳಾ ನಿರ್ಮಾಪಕಿಯಾಗಿ ಸಮಾಜಕ್ಕೆ ಹತ್ತಿರವಾದ ಹಾಗೂ ಉತ್ತಮ ಅಭಿರುಚಿಯುಳ್ಳ ಇಂತಹ ಕಥೆಯನ್ನು ತೆರೆಯ ಮೇಲೆ ತರುತ್ತಿರುವುದು ನಮ್ಮ ಇಡೀ ತಂಡಕ್ಕೆ ಹೆಮ್ಮೆ ಮತ್ತು ಸಂತಸ ತಂದಿದೆ ಎನ್ನುತ್ತಾರೆ ನಿರ್ಮಾಪಕರು. ಸಾಮಾಜಿಕ ಗಂಭೀರತೆಯ ಜೊತೆಗೆ ಹೃದಯಸ್ಪರ್ಶಿ ಪ್ರೇಮಕಥೆಯನ್ನು ಹೊಂದಿರುವ ‘ಲಾಕ್ಡೌನ್ 21 ಡೇಸ್’ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲಿದೆ. ಇದನ್ನೂ ಓದಿ: ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ – ಕಿಚ್ಚನ ಡೈಲಾಗ್
