ರಾಯಚೂರು: ಜಿಲ್ಲೆಯಲ್ಲಿ ಸೂರ್ಯೋದಯಕ್ಕೂ ಮುನ್ನ ಬಾರ್ ಗಳ ಬಾಗಿಲು ತೆರೆದಿರುತ್ತವೆ. ಮದ್ಯವ್ಯಸನಿಗಳಂತೂ ಈ ಮದ್ಯದಂಗಡಿಗಳ ಮುಂದೆ ಬೆಳಿಗ್ಗೆ ಐದು ಗಂಟೆಯಿಂದಲೇ ಕಾಯುತ್ತ ಕುಳಿತಿರುತ್ತಾರೆ.
ಹೌದು. ರಾಯಚೂರು ನಗರದ ಶ್ರೀ ನಂದಿ ಬಾರ್ ಆ್ಯಂಡ್ ಗಾರ್ಡನ್ ರೆಸ್ಟೋರೆಂಟ್ ಹಾಗೂ ಮಂಜು ವೈನ್ಸ್ ಸೇರಿದಂತೆ ಹಲವು ಮದ್ಯದಂಗಡಿಗಳು ಎಗ್ಗಿಲ್ಲದೆ ಬೆಳ್ಳಂಬೆಳಿಗ್ಗೆ ವ್ಯಾಪಾರ ಶುರು ಮಾಡುತ್ತಿವೆ.
ಬೆಳಿಗ್ಗೆ 10:30ರ ನಂತರ ಮದ್ಯದ ಅಂಗಡಿಗಳನ್ನ ತೆರೆಯಬೇಕು ಎನ್ನುವ ನಿಯಮವಿದ್ದರೂ ಅದನ್ನ ಗಾಳಿಗೆ ತೂರಿ ಬೆಳಿಗ್ಗೆ ಐದು ಗಂಟೆಗೆ ಮದ್ಯ ಮಾರಾಟ ನಡೆಯುತ್ತಿದೆ. ಈ ವಿಚಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರೂ ಕೂಡ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕರು ಇದುವರೆಗೂ ನೀಡಿದ ದೂರಿಗೆ ಬೆಲೆಯೇ ಇಲ್ಲದಂತಾಗಿದೆ.
ಬೆಳ್ಳಂಬೆಳಿಗ್ಗೆ ಮದ್ಯದಂಗಡಿ ತೆರೆಯುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಮದ್ಯದ ಅಮಲಿನಲ್ಲೇ ಕಾಲಕಳೆಯುತ್ತಿದ್ದಾರೆ. ಇದರಿಂದ ಬಡಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಸ್ಥಳೀಯ ಹೋರಾಟಗಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಿಯಮ ಬಾಹಿರವಾಗಿ ಬೇಗನೆ ತೆರೆಯುವ ಬಾರ್ ಗಳ ಅನುಮತಿ ರದ್ದುಗೊಳಿಸಬೇಕು ಅಂತ ಆಗ್ರಹಿಸಿದ್ದಾರೆ. ಇತ್ತ ಅಬಕಾರಿ ಅಧಿಕಾರಿಗಳು ಮಾತ್ರ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಜಾಣ ಉತ್ತರ ಹೇಳಿ ಜಾರಿಕೊಳ್ಳುತ್ತಲೇ ಇದ್ದಾರೆ.