ಕೊಪ್ಪಳ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಭಾಗದಲ್ಲಿರುವ ಕೆರೆ (Lake) ಗಳನ್ನು ಅಭಿವೃದ್ಧಿಪಡಿಸಲು ಅಮೃತ ಸರೋವರ ಯೋಜನೆ (Amruth Sarovara Yojana) ಆರಂಭಿಸಿದೆ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಿದ ಕೆರೆಗಳ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಅಮೃತ ಸರೋವರ ಯೋಜನೆಯಡಿ ಕೊಪ್ಪಳ ತಾಲೂಕಿನ ಬಹದ್ದೂರು ಬಂಡಿ ಗ್ರಾಮದಲ್ಲಿರುವ ಕೋಟೆಗೆ ಹೊಂದಿರುವ ಬೆಟ್ಟದ ಕೆಳಗಿನ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಕೆರೆಯನ್ನು ಆಗಸ್ಟ್ 15ರಂದು ಲೋಕಾರ್ಪಣೆ ಮಾಡಲಾಗಿದೆ. ಲೋಕಾರ್ಪಣೆಯಾದ ಕೇವಲ 45 ದಿನಗಳಲ್ಲಿ ಈ ಕೆರೆಯ ತಡೆಗೋಡೆ ಬಿದ್ದು ಹೋಗಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೆರೆಯನ್ನು ಒಟ್ಟು 42 ಲಕ್ಷ ರೂಪಾಯಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಡೆಗೋಡೆ ಕಾಮಗಾರಿ ಕಳಪೆಯಾಗಿದ್ದು, ಇದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಬಹದ್ದೂರುಬಂಡಿ ಪಿಡಿಒ ಜ್ಯೋತಿರನ್ನು ಕೇಳಿದರೆ ಇತ್ತೀಚಿಗೆ ಭಾರೀ ಮಳೆಯಾಗಿದೆ. ಬೆಟ್ಟದಿಂದ ರಭಸವಾಗಿ ನೀರು ಹರಿದು ಬಂದಿದ್ದರಿಂದ ತಡೆಗೋಡೆ ಕುಸಿದಿದೆ. ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ನವರಾತ್ರಿ ದಾಂಡಿಯಾ ಉತ್ಸವದಲ್ಲಿ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್ಸ್
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ನಿರ್ಮಿಸಿದ ಅನೇಕ ಕೆರೆಕಟ್ಟೆಗಳು ಏನೂ ಆಗಿಲ್ಲ. ಆದರೆ ಈಗಿನ ಕೆರೆಗಳು ನಿರ್ಮಿಸಿದ ಸ್ವಲ್ಪ ದಿನಕ್ಕೆ ಹಾಳಾಗುತ್ತಿರುವುದಕ್ಕೆ ಕಳಪೆ ಕಾಮಗಾರಿ ಅಲ್ಲದೆ ಮತ್ತಿನ್ನೇನು ಎನ್ನಬೇಕು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.