ಬೆಂಗಳೂರು: ಮೈತ್ರಿ ಸರ್ಕಾರದಲ್ಲಿಯೇ ಸೂಪರ್ ಸಿಎಂ ಅಂತಾನೆ ಕರೆಸಿಕೊಳ್ಳುವ ಎಚ್.ಡಿ.ರೇವಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಸರ್ಕಾರ ರಚನೆಯ ಬಳಿಕ ಎಲ್ಲ ಸಚಿವರಿಗೂ ಸರ್ಕಾರಿ ಬಂಗಲೆಯನ್ನು ನೀಡಲಾಗಿದೆ. ಆದ್ರೆ ಎಚ್.ಡಿ.ರೇವಣ್ಣ ತಮ್ಮ ಕಟ್ಟಡದ ಕೊಳಚೆ ನೀರನ್ನು ರಸ್ತೆಗೆ ತಿರುಗಿಸುವ ಕೆಲಸ ಮಾಡಿದ್ದಾರೆ.
ಸದ್ಯ ಆಷಾಢ ಮಾಸ ಇರೋದರಿಂದ ಸರ್ಕಾರಿ ಬಂಗಲೆಗೆ ಸಚಿವರು ಪ್ರವೇಶ ಮಾಡಿಲ್ಲ. ಆಷಾಢ ಕಳೆದ ಮೇಲೆ ಶಿವಾನಂದ ಸರ್ಕಲ್ ಬಳಿ ಇರುವ ಕುಮಾರಕೃಪಾ ನಂಬರ್ 1 ನಿವಾಸಕ್ಕೆ ಎಚ್.ಡಿ.ರೇವಣ್ಣ ಪ್ರವೇಶ ಮಾಡಲಿದ್ದಾರೆ. ಆದರೆ ಪ್ರವೇಶಕ್ಕೂ ಮುನ್ನವೇ ವಾಸ್ತು ಪ್ರಕಾರ ಕಟ್ಟಡದ ನವೀಕರಣ ನಡೆಯುತ್ತಿದೆ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಹೆಚ್.ಸಿ.ಮಹಾದೇವಪ್ಪ ತಮ್ಮ ಪ್ರವೇಶದ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಡದ ನವೀಕರಣಗೊಳಿಸಿದ್ದರು. ಈಗ ಮತ್ತೆ ಅದೇ ಕಟ್ಟಡದ ನವೀಕರಣ ನಡೆಯುತ್ತಿದೆ.
ಮಳೆಯಾದರೆ ಕುಮಾರ ಕೃಪಾ ಮುಂದೆ ಮಳೆನೀರು ನಿಂತುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರನ್ನು ರಸ್ತೆಗೆ ತಿರುಗಿಸಿದ್ದಾರೆ. ಮಳೆಯ ನೀರು ಮತ್ತು ಕಟ್ಟಡದ ಕೊಳಚೆ ನೇರವಾಗಿ ರಸ್ತೆಯ ಮೇಲೆ ಹರಿಯುವ ಸಾಧ್ಯತೆಗಳಿವೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ.
ಅತಿ ಹೆಚ್ಚಾಗಿ ಜೋತಿಷ್ಯ ನಂಬುವ ಸಚಿವರು ಸಾರ್ವಜನಿಕರ ಹಣದಲ್ಲಿ ಸರ್ಕಾರದ ಕಟ್ಟಡವನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳುತ್ತಿರೋದು ಇದೀಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಕೊಳಚೆ ನೀರನ್ನು ರಸ್ತೆಗೆ ಹರಿಸುವ ಮೂಲಕ ಕೇವಲ ತಮ್ಮ ಸುರಕ್ಷತೆ ನೋಡಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡಿದಂತಾಗುತ್ತದೆ. ಸಚಿವರೇ ನೀವು ಹೇಗೆ ಮಾಡಬಹುದಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.