ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (BIAL) ತನ್ನಲ್ಲಿ ಶೇ.13ರಷ್ಟು ಬಂಡವಾಳ ಪಾಲು ಹೊಂದಿರುವ ರಾಜ್ಯ ಸರ್ಕಾರಿ ಸ್ಯಾಮ್ಯದ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (KSIIDC) 2025-26ನೇ ಸಾಲಿಗೆ ಅನ್ವಯವಾಗುವಂತೆ 16,49,93,400 ರೂ.ಗಳ ಲಾಭಾಂಶವನ್ನು (Dividend) ಸೋಮವಾರ ಹಸ್ತಾಂತರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಐಎಎಲ್ ಅಧ್ಯಕ್ಷ ಹರಿ ಮರಾರ್ ಅವರಿಂದ ಚೆಕ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯೆಲ್ ಉಪಸ್ಥಿತರಿದ್ದರು.

ಬಿಐಎಎಲ್ 2025-26ನೇ ಸಾಲಿಗೆ ಅನ್ವಯವಾಗುವಂತೆ ಪ್ರತೀ ಷೇರಿಗೆ 3 ರೂ. ಲಾಭಾಂಶ ಘೋಷಿಸಿದೆ. ಇದರಂತೆ ಕೆಎಸ್ಐಐಡಿಸಿಗೆ 16.49 ಕೋಟಿ ರೂಪಾಯಿ ಒಟ್ಟು ಲಾಭಾಂಶ ಕೊಡಲಾಗಿದೆ. ಇದರಲ್ಲಿ ತೆರಿಗೆ ಕಡಿತದ ನಂತರ ಆ ಸಂಸ್ಥೆಗೆ 14.84 ಕೋಟಿ ರೂಪಾಯಿ ಡಿವಿಡೆಂಡ್ ಸಿಕ್ಕಿದೆ ಎಂದಿದ್ದಾರೆ.
ಈ ಲಾಭಾಂಶ ಘೋಷಣೆಯು ಬಿಐಎಎಲ್ ಸಂಸ್ಥೆಯ ಅತ್ಯುತ್ತಮ ಆರ್ಥಿಕ ನಿರ್ವಹಣೆಯ ಸಂಕೇತವಾಗಿದೆ. ಸಂಸ್ಥೆಯಲ್ಲಿ ಕೆಎಸ್ಐಐಡಿಸಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿದೆ. ಬಿಐಎಎಲ್ ಸಂಸ್ಥೆಯು 2017-18ರ ಬಳಿಕ ಇದೇ ಮೊದಲ ಬಾರಿಗೆ ಡಿವಿಡೆಂಡ್ ಘೋಷಿಸಿದೆ. ನಾವು ಬಂದ ಲಾಭವನ್ನು ಮೂಲಸೌಕರ್ಯ ಮತ್ತು ಸಾಮರ್ಥ್ಯ ವಿಸ್ತರಣೆಯಂತಹ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳನ್ನು ದೃಢಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮಿಕ್ಕಂತೆ ಬಿಐಎಎಲ್ನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಶೇ.13, ಎಫ್ಐಹೆಚ್ ಮಾರಿಷಸ್ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ ಶೇಕಡ 30.36 ಮತ್ತು ಆ್ಯಂಕರೇಜ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಶೇಕಡ 43.64ರಷ್ಟು ಬಂಡವಾಳ ಪಾಲು ಹೊಂದಿವೆ.
