ಶಿವಮೊಗ್ಗ: ಕೋವಿಡ್ ಮೂರನೇ ಅಲೆಯಲ್ಲ, ಮೂವತ್ತನೇ ಅಲೆ ಬಂದರೂ ಹೆದರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಿವಾಸಿ ಭಾರತೀಯರಾಗಿರುವ ಭೂಪಾಳಂ ಕುಟುಂಬದವರು, ಕೋವಿಡ್ ನಿಯಂತ್ರಣಕ್ಕೆ 5 ಕೋಟಿ ರೂ. ಮೌಲ್ಯದ ಸಲಕರಣೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಈಶ್ವರಪ್ಪ ಚಾಲನೆ ನೀಡಿದ್ದಾರೆ. ಈ ವೇಳೆ ಕೋವಿಡ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಸರ್ಕಾರದ ಜೊತೆಗೆ ಅನೇಕ ಸಂಘ-ಸಂಸ್ಥೆಗಳು ಕೈಜೋಡಿಸಿದ್ದು, ಸಾಕಷ್ಟು ನೆರವು ನೀಡುತ್ತಿವೆ. ಹೀಗಾಗಿ ಕೋವಿಡ್ ನಿಯಂತ್ರಣ ಕಷ್ಟವಿಲ್ಲ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ:ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ
ಕೋವಿಡ್ ಮೂರನೇ ಅಲೆಯಲ್ಲ, ಮೂವತ್ತನೇ ಅಲೆ ಬಂದರೂ ಹೆದರುವುದಿಲ್ಲ. ನಮಗೆ ನಂಬಿಕೆ ಇದೆ. ನಮ್ಮ ಸರ್ಕಾರ ಇದನ್ನು ಸಮರ್ಪಕವಾಗಿ ನಿಭಾಯಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೊದಲಿನಿಂದಲೂ ಭೂಪಾಳಂ ಕುಟುಂಬ ಕೊಡುಗೈ ದಾನದಲ್ಲಿ ಮುಂದಿತ್ತು. ಈಗಲೂ ಆ ಕುಟುಂಬದವರು ಅದನ್ನು ಉಳಿಸಿಕೊಂಡಿದ್ದಾರೆ. ಅವರ ಆಶ್ರಯದಲ್ಲಿಯೇ ಅನೇಕರು ನೆರವು ಪಡೆದಿದ್ದಾರೆ ಎಂದು ಪ್ರಶಂಸಿದ್ದಾರೆ.ಇದನ್ನೂ ಓದಿ:ಹಿರಿಯ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್ಐಆರ್
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಭೂಪಾಳಂ ಕುಟುಂಬದವರು ಕೋಟ್ಯಂತರ ರೂ. ಮೌಲ್ಯದ ಔಷಧ ಹಾಗೂ ಸಲಕರಣೆಗಳನ್ನು ದಾನವಾಗಿ ನೀಡಿದ್ದಾರೆ. ದಾನ ನೀಡಲು ಕೂಡ ಮನಸ್ಸಿರಬೇಕು. ಮಾನವೀಯ ಸ್ಪಂದನೆಯಿಂದಾಗಿ ಕೋಟ್ಯಂತರ ರೂ. ಮೌಲ್ಯದ ಸಲಕರಣೆಗಳು ಸರ್ಕಾರಿ ಆಸ್ಪತ್ರೆಗೆ ಬಂದಿವೆ. ಅದರಲ್ಲಿ ವೆಂಟಿಲೇಟರ್, ಆಕ್ಸಿಜನ್ ಕಾನ್ಸಟ್ರೇಟರ್ ಮೊದಲಾದವು ಸೇರಿವೆ. ಈ ಸ್ಪಂದನೆಯಿಂದಾಗಿಯೇ ರಾಜ್ಯದಲ್ಲಿಯೇ ಮೆಗ್ಗಾನ್ ಆಸ್ಪತ್ರೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದಿದ್ದಾರೆ.