ಉಡುಪಿ: ನಾನ್ಯಾರು ಗೊತ್ತಿಲ್ಲ ಎಂದ ರಾಧಮೋಹನ್ ಅಗರ್ವಾಲ್ (Radha Mohan Das Agarwal) ನಮ್ಮ ಮನೆಗೆ ಬಂದಿದ್ದರು. ಅವರಿಗೆಲ್ಲೋ ಮರೆವು ಎಂದು ಮಾಜಿ ಸಚಿವ ಹಾಗೂ ಶಿವಮೊಗ್ಗದ ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ (K.S Eshwarappa) ತಿರುಗೇಟು ಕೊಟ್ಟಿದ್ದಾರೆ.
ಬೈಂದೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇತ್ತೀಚೆಗೆ ಈಶ್ವರಪ್ಪ ಎಂಬ ಹೆಸರಿನವರ್ಯಾರು ನನಗೆ ಪರಿಚಯ ಇಲ್ಲ ಎಂದಿದ್ದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ವೇಳೆ ನನ್ನ ಮಾತು ಅಮಿತ್ ಶಾಗೆ ತಲುಪಿದೆ. ಇಂದು ಸಹ ನನಗೆ ಕರೆ ಬಂದಿದೆ. ಈ ವಿಚಾರ ತಿಳಿದು ಉತ್ತರ ಕೊಡಲು ಆಗಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಬಸ್ ಹತ್ತಿದ ಮಹಿಳೆ – ಮುಜುಗರದಿಂದ ಸೀಟು ಬಿಟ್ಟು ಹೋದ ಪ್ರಯಾಣಿಕ; ವೀಡಿಯೋ ಫುಲ್ ವೈರಲ್
ನನ್ನ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ. ಗೀತಾ ಶಿವರಾಜ್ಕುಮಾರ್ ಯಡಿಯೂರಪ್ಪ ಹಾಕಿರುವ ಡಮ್ಮಿ ಅಭ್ಯರ್ಥಿ. ಅಸಮಾಧಾನಿತ ಕಾಂಗ್ರೆಸ್ ಮತಗಳು ನನಗೆ ಬರಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ ಎಂದರು.
ವಿಜಯೇಂದ್ರ ಇನ್ನೂ ಎಳಸು, ನನ್ನ ಸಾಧನೆ ನಿನ್ನ ಅಪ್ಪನಿಗೆ ಕೇಳು. ರಾಜ್ಯದಲ್ಲಿ ಏನೂ ಕೆಲಸ ಮಾಡಿಲ್ಲ ಎನ್ನಲಿ, ಆಗ ನಿಮಗೆ ಉತ್ತರ ಕೊಡುತ್ತೇನೆ. ತಪಸ್ಸಿಂದ ಕಟ್ಟಿದ ಪಕ್ಷ ಅಧೋಗತಿಗೆ ಹೋಗುತ್ತಿದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಕಂಪನಿ ಅಲ್ಲ. ನನಗೆ ಆರ್ಎಸ್ಎಸ್, ಸಂಘಪರಿವಾರ ಶಿವಮೊಗ್ಗದಲ್ಲಿ ಬೆಂಬಲಿಸಿದೆ. ಕರ್ನಾಟಕದ ಮೂಲೆ ಮೂಲೆಯಿಂದ ಜನ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ರಾಜ್ಯದಲ್ಲಿ ಮೈತ್ರಿ ಮುಂದುವರೆಯತ್ತದೆ ಎಂದಿದ್ದಾರೆ. ಕಾಂಗ್ರೆಸ್ ಜೊತೆ ಇರೋ ಮೈತ್ರಿ ಮುಂದುವರೆಯುತ್ತೋ? ಒಳ ಒಪ್ಪಂದದ ಮೈತ್ರಿಯೋ ಗೊತ್ತಿಲ್ಲ. ಮೈತ್ರಿ ಒಪ್ಪಂದ ಒಳಮರ್ಮ ಹೆಚ್ಡಿಕೆಗೆ ಬೇಗ ಅರ್ಥವಾಗಲಿ. ನಮ್ಮ ಡಿವಿಎಸ್, ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಸೈನ್ಯಕ್ಕೆ ದ್ರೋಹವಾಗಿದೆ. ಬಿವೈವಿ ಯೋಗ್ಯತೆ ಒಂದು ತಿಂಗಳಲ್ಲಿ ಗೊತ್ತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಸಭೆಯಲ್ಲಿ ಕುಂಕುಮ ಒರೆಸಿದ ಗೀತಾ ಶಿವರಾಜ್ಕುಮಾರ್ ವಿಚಾರವಾಗಿ, ಇದು ಡೋಂಗಿ ಜಾತ್ಯಾತೀತ ವ್ಯವಸ್ಥೆಯ ಪ್ರದರ್ಶನವಾಗಿದೆ. ಇವರೆಲ್ಲ ಮುಸಲ್ಮಾನರನ್ನು ಸಂತೃಪ್ತಿ ಮಾಡಿಕೊಂಡಿರಲಿ. ಹಿಂದೂ, ಹಿಂದುತ್ವ ವಿರೋಧ ಮಾಡಿಕೊಂಡರೆ ಬಾಳ್ವೆಯಿಲ್ಲ. ನಾನು, ನನ್ನ ಜೊತೆ ಬಂದವರು ತಾಯಿ ಭಾರತಿಯನ್ನು ನಂಬಿದವರು ಎಂದರು.
ಚುನಾವಣೆಗೆ ಸಾಧು ಸಂತರನ್ನು ನಡುವೆ ತರುವುದು ನೋವಿನ ಸಂಗತಿಯಾಗಿದೆ. ಈ ವಿಚಾರವನ್ನು ರಾಷ್ಟ್ರ ಭಕ್ತಬಳಗ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಚಾರಿ ಪೊಲೀಸರಿಗೆ ಎಸಿ ಹೆಲ್ಮೆಟ್ – ಗುಜರಾತ್ ಪ್ರಯೋಗ ಯಶಸ್ವಿ